ರಷ್ಯಾ ಉಕ್ರೇನ್ ಯುದ್ಧದ 34ನೆಯ ದಿನ; ಝೆಲೆನ್ಸ್ಕಿ ಹೇಳಿದ್ದೇನು?

ಕೈವ್ (ಉಕ್ರೇನ್): ಹೌದು, ತೋಳ ಕುರಿಮರಿ ನ್ಯಾಯದಂತೆ ರಷ್ಯಾ ಕುಂಟುನೆಪ ಹೇಳಿಕೊಂಡು ಉಕ್ರೇನ್ ಮೇಲೆ ಯುದ್ಧ ಮಾಡಲು ಪ್ರಾರಂಭ ಮಾಡಿ ಇಂದಿಗೆ ಭರ್ತಿ 34 ದಿನಗಳಾದವು. ಉಕ್ರೇನ್ ಅರ್ಧಂಬರ್ಧ ಸ್ಮಶಾನವಾಗಿಯೂ ಆಯಿತು. ಆದರೆ ಇದುವರೆಗೂ ರಷ್ಯಾಗೆ ಯುಕ್ರೇನನ್ನು ಸಂಪೂರ್ಣವಾಗಿ ಮಣಿಸಲು ಸಾಧ್ಯವಾಗಿಲ್ಲ. ಉಕ್ರೇನಿಗೆ ರಷ್ಯಾವನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ. ಪುಟಿನ್ ಹಾಗೂ ಝಿಲೆನ್ಸ್ಕಿ ಎಂಬ ಇಬ್ಬರು ಮಹಾ ಮೂರ್ಖ ನಾಯಕರ ಮಧ್ಯೆ ಪ್ರತಿದಿನ ಉಕ್ರೇನಿನ ಸಾವಿರಾರು ಮುಗ್ದ ನಾಗರಿಕರ ಮಾರಣಹೋಮ ನಡೆಯುವುದು ಮಾತ್ರ ಇನ್ನೂ ತಪ್ಪಿಲ್ಲ.

ಯುದ್ಧದ ಪ್ರಾರಂಭದ ದಿನಗಳಲ್ಲಿ ಪುಟಿನ್ ಹೇಳಿದ್ದು, ಉಕ್ರೇನ್ ನ್ಯಾಟೋಗೆ ಸೇರದಿದ್ದರೆ ಮತ್ತು ಸೇರುವುದಿಲ್ಲವೆಂದು ಬರೆದು ಕೊಟ್ಟರೆ ನಾವು ಯುದ್ಧ ನಿಲ್ಲಿಸುತ್ತೇವೆ ಎಂದು. ಆದರೆ ಆಗ ಝಿಲೆನ್ಸ್ಕಿ ಅದನ್ನು ಒಪ್ಪಿಕೊಳ್ಳಲಿಲ್ಲ. ನಂತರ ಯುದ್ಧದ 24ನೆಯ ದಿನದಲ್ಲಿ ರಷ್ಯಾ ದಾಳಿಯಿಂದ ತತ್ತರಿಸಿ ಹೋದ ಝಿಲೆನ್ಸ್ಕಿ ತಮ್ಮ ದೇಶ ನ್ಯಾಟೋಗೆ ಸೇರುವುದಿಲ್ಲ ಎಂದು ಹೇಳಿಕೆ ನೀಡಿದರು. ಆದರೆ ಅಷ್ಟೊತ್ತಿಗಾಗಲೇ ಕಾಲ ಮಿಂಚಿಹೋಗಿತ್ತು. ಪುಟಿನ್ಗೆ ಆಗ ಈ ಒಂದು ಹೇಳಿಕೆಗೆ ಯುದ್ಧ ನಿಲ್ಲಿಸಿ ಮನೆಗೆ ವಾಪಸಾಗುವ ಮನಸ್ಥಿತಿ ಬದಲಾಗಿಹೋಗಿತ್ತು. ಹಾಗಾಗಿ ಆ ದಿನಗಳಲ್ಲಿ ಮಾತುಕತೆಯ ಸಮಯದಲ್ಲಿ ರಷ್ಯಾ ಹೊಸಹೊಸ ಶರತ್ತುಗಳನ್ನು ಮುಂದಿಟ್ಟಿತು.

ಹೀಗೆ ಪ್ರತಿದಿನವೂ ಮಾತುಕತೆ ನಡೆಯುತ್ತಿದ್ದರೂ, ಎರಡೂ ಕಡೆಯವರು ತಮ್ಮ ತಮ್ಮ ವಾದಕ್ಕೆ ಜೋತುಬಿದ್ದಿರುವುದರಿಂದ ಯುದ್ಧ ತಕ್ಷಣಕ್ಕೆ ನಿಲ್ಲುವ ಯಾವುದೇ ಸಾಧ್ಯತೆಗಳು ಗೋಚರಿಸುತ್ತಿಲ್ಲ. ಇದೀಗ ಯುದ್ಧದ 34ನೆಯ ದಿನ ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝಿಲೆನ್ಸ್ಕಿ ಮತ್ತೆ ಅದೇ ಹಳೇ ರಾಗವನ್ನು ಹಾಡಿದ್ದಾರೆ. ರಷ್ಯಾ ಜೊತೆಗೆ ಮಾತುಕತೆಗೆ ತಾವು ಸಿದ್ದ, ಆದರೆ ಈ ಮಾತುಕತೆ ಯಾವುದಾದರೂ ತಟಸ್ಥ ದೇಶದಲ್ಲಿ ಆಗಬೇಕು. ಅದಕ್ಕೆ ಉಕ್ರೇನ್ ನಾಗರಿಕರು ಒಪ್ಪಿಗೆ ಕೊಡಬೇಕು ಎಂದು. ಒಂದು ಮೂಲದ ಪ್ರಕಾರ ಮಾತುಕತೆ ತುರ್ಕಿಯ ಇಸ್ತಾಂಬುಲ್ನಲ್ಲಿ ಆಗುವ ಸಾಧ್ಯತೆಯಿದೆ.

ಇದಿಷ್ಟೇ ಅಲ್ಲದೆ ಝಿಲೆನ್ಸ್ಕಿರಷ್ಯಾದ ಕೆಲವು ಪತ್ರಕರ್ತರ ಜೊತೆ ನಡೆಸಿದ ವಿಡಿಯೋ ಸಂದರ್ಶನದಲ್ಲಿ ರಷ್ಯಾ ತಮಗೆ ಎಲ್ಲಾ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗಲು ಹೇಳುತ್ತಿದೆ. ಆದರೆ ಈ ಶರತ್ತಿಗೆ ಒಪ್ಪಿ ತಾವು ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಇದೇ ಸಮಯದಲ್ಲಿ ಮಾತುಕತೆಯನ್ನು ಮುಂದುವರೆಸುವುದಾಗಿಯೂ ಸಹ ಝಿಲೆನ್ಸ್ಕಿ ಹೇಳಿದ್ದಾರೆ. ರಷ್ಯಾ ಮಾತ್ರ ಈ ಸಂದರ್ಶನವನ್ನು ಪ್ರಸಾರ ಮಾಡದಂತೆ ಅಲ್ಲಿನ ಸ್ಥಳೀಯ ಚಾನಲ್ಗಳ ಮೇಲೆ ನಿರ್ಭಂಧ ಹೇರಿದೆ.
ಓಂಪ್ರಕಾಶ್ ನಾಯಕ್, 24X7ಲೈವ್ಕನ್ನಡಬಿಎಂಜಿನ್ಯೂಸ್




