ಗೋಕರ್ಣ: ಮಳೆ ಆರ್ಭಟಕ್ಕೆ ಜನಜೀವನ ತತ್ತರ

ಕಾರವಾರ : ಗೋಕರ್ಣದಲ್ಲಿ ಮಳೆಯ ಆರ್ಭಟ ಶುಕ್ರವಾರವೂ ಮುಂದುವರಿದಿತ್ತು. ಮುಂಜಾನೆಯಿಂದ ಸಂಜೆಯವರೆಗೂ ಧಾರಾಕಾರ ಮಳೆಯಾಗಿದೆ.
ಮುಖ್ಯ ಕಡಲತೀರಕ್ಕೆ ಸಾಗುವ ಮಾರ್ಗದ ಸಂಗಮ ನಾಲಾದಿಂದ ಮಹಾಬಲೇಶ್ವರ ದೇವಾಲಯದ ಪಶ್ಚಿಮ ದ್ವಾರದವರೆಗೆ ರಸ್ತೆಯಲ್ಲಿ ನೀರು ತುಂಬಿ, ಜನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಸಂಗಮ ನಾಲಾಕ್ಕೆ ನೂತನ ಸೇತುವೆ ನಿರ್ಮಿಸುವ ವೇಳೆ ಚರಂಡಿ ಮುಚ್ಚಿ ಹಾಕಲಾಗಿತ್ತು. ಇದರ ಪರಿಣಾಮ ನೀರು ಹಳ್ಳಕ್ಕೆ ಸೇರದೆ ರಸ್ತೆಯಲ್ಲಿ ಹರಿಯುವಂತಾಗಿತ್ತು.ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು,ರಸ್ತೆ ಸಂಪೂರ್ಣ ಜಲಮಯವಾದ್ದರಿಂದ ಸಂಚರಿಸಲು ಪರದಾಡಿದರು.
ಮೂಡಂಗಿಯಲ್ಲಿ ಗುಡ್ಡದಿಂದ ಬರುವ ಮಳೆಯ ನೀರು ಹರಿದು ಹೋಗಲು ಹಾಕಿದ್ದ ಪೈಪ್ ಬ್ಲಾಕ್ ಆದ ಕಾರಣ ಕೆಲಕಾಲ ವಸತಿ ಪ್ರದೇಶಗಳಲ್ಲಿ ನೀರು ತುಂಬಿತ್ತು. ನಂತರ ಪಂಚಾಯತ ಅಭಿವೃದ್ದಿ ಅಧಿಕಾರಿ ವಿನಯಕುಮಾರ ಭೇಟಿ ನೀಡಿ ನೀರು ಸರಾಗವಾಗಿ ಹೋಗಲು ಅನುವು ಮಾಡಿಕೊಡಲು ಕ್ರಮ ಕೈಗೊಂಡಿದ್ದಾರೆ. ಇಲ್ಲಿನ ಗಂಜಿಗದ್ದೆ ರಸ್ತೆ ಪಕ್ಕದ ಕಂಪೌಂಡ್ ಕುಸಿದು ಚರಂಡಿಯಲ್ಲಿ ಬಿದ್ದ ಪರಿಣಾಮ ರಸ್ತೆ ಜಲಾವೃತಗೊಂಡಿತ್ತು.
ಮಹಾಬಲೇಶ್ವರ ದೇವಾಲಯದಲ್ಲಿ ಶುಕ್ರವಾರ ಮುಂಜಾನೆ ಕೆಲಕಾಲ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ಆವರಿಸಿತ್ತು. ದೇವಾಲಯದ ಸಿಬ್ಬಂದಿ,ಕೆಲಸಗಾರರು ಸೇರಿ ಮಂದಿರದ ಅಭಿಷೇಕದ ಜಲ ಮತ್ತು ಮಳೆಯ ನೀರು ಸಂಗಮ ನಾಲಾ ಸೇರುವ ಸೋಮಸೂತ್ರ ಕಾಲುವೆಯನ್ನು ಬಿಡಿಸಿಕೊಟ್ಟಿದ್ದಾರೆ.ಕಾಲುವೆ ಅಂಚು ಕುಸಿದು ಬಿದ್ದ ಕಡೆ ಅದನ್ನು ತೆರವುಗೊಳಿಸಿ ನೀರು ಹರಿದು ಹೋಗುವಂತೆ ಮಾಡಿಕೊಡಲಾಗಿದೆ.




