ನೋಂದಾಯಿತ ಕಾರ್ಮಿಕರಿಗೆ ಕೊಡುವ ಕಿಟ್ ಬಿಜೆಪಿ ಕಾರ್ಯಕರ್ತರಿಗೆ; ಕುಮಟಾದಲ್ಲಿ ಬೆಳಕಿಗೆ ಬಂದ ಪ್ರಕರಣ

ಕಾರವಾರ : ಕೋವಿಡ್ ಎರಡನೇ ಅಲೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಸರಕಾರ ನೀಡಿದ್ದ ಆಹಾರದ ಕಿಟ್ ಅನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನೀಡಿ ಕೈ ತೊಳೆದುಕೊಂಡಿದ್ದಾರೆ ಎಂಬ ಆರೋಪ ಈಗ ಬಲವಾಗಿ ಕೇಳಿ ಬರುತ್ತಿದೆ.ಕಿಟ್ ಸಿಗದ ನಿಜವಾದ ಕಾರ್ಮಿಕರು ಆಡಳಿತ ವ್ಯವಸ್ಥೆ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಕುಮಟಾ ಕ್ಷೇತ್ರದಲ್ಲಿ ಒಟ್ಟೂ ಎಂಟು ಸಾವಿರ ಕಿಟ್ ಅನ್ನು ನೀಡಲಾಗಿತ್ತು.ಆದರೆ ಈ ಪೈಕಿ ನಿಜವಾದ ಕಾರ್ಮಿಕರಿಗೆ ಕಿಟ್ ನೀಡುವ ಬದಲು ಒಂದಿಷ್ಟು ಕಾರ್ಮಿಕರ ಜತೆಯಾಗಿ ಬಿಜೆಪಿ ಕಾರ್ಯಕರ್ತರಿಗೆ ಕಿಟ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕುಮಟಾ ಶಾಸಕ ದಿನಕರ ಶೆಟ್ಟಿ ಕಾರ್ಮಿಕರಿಗೆ ಬಂದ ಕಿಟ್ ಅನ್ನು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ನೀಡಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂಬ ಬಲವಾದ ಆರೋಪ ಕಾರ್ಮಿಕರದ್ದಾಗಿದೆ.ಕಿಟ್ ಸಿಗದ ಸಾವಿರಾರು ಕಾರ್ಮಿಕರು ಕಿಟ್ ಸಿಗದ ಬಗ್ಗೆ ಸಂಬಂಧಿಸಿದವರಲ್ಲಿ ವಿಚಾರಿಸಲು ಹೋದಾಗ ವಿಷಯ ಬಯಲಾಗಿದೆ. ಕಾರ್ಮಿಕರೇ ಇಲ್ಲದ ಬಿಜೆಪಿ ಪಕ್ಷದ ಕಾರ್ಯಕರ್ತರು ಕಿಟ್ ಪಡೆದಿರುವುದು ಬಯಲಿಗೆ ಬಂದಿದ್ದು,ನಿಜವಾದ ಕಾರ್ಮಿಕರು ಸರಕಾರ ನಿಡಿದ ಆಹಾರ ಕಿಟ್ ನಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ ?
ಉತ್ತರಕನ್ನಡ ಜಿಲ್ಲೆಯಲ್ಲಿಯೂ ಸಹ ಕೊರೋನಾ ಎರಡನೇ ಅಲೆಯಲ್ಲಿ ಸಾವಿರಾರು ನೋಂದಾಯಿತ ಕಾರ್ಮಿಕರಿಗೆ ಸರಕಾರ ಕಿಟ್ ವಿತರಣೆ ಮಾಡಿದೆ. ಆದರೆ ಇದನ್ನು ದುರ್ಬಳಕೆ ಮಾಡಿಕೊಂಡ ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಕಾರ್ಮಿಕರಿಗಾಗಿ ಬಂದಿರೋ ಸಾವಿರಾರು ಆಹಾರ ಕಿಟ್ ಗಳನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರಿಗೆ ವಿತರಣೆ ಮಾಡೋ ಬದಲು ತನ್ನ ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರಿಗೆ ನೀಡೋ ಮೂಲಕ ನಿಜವಾದ ಕಾರ್ಮಿಕರಿಗೆ ವಂಚನೆ ಮಾಡಿದ್ದಾರೆ ಅನ್ನೋ ಆರೋಪ ಇದೀಗ ಕುಮಟಾ ಕ್ಷೇತ್ರದ ಕಾರ್ಮಿಕರಿಂದ ಕೇಳಿ ಬರ್ತಾ ಇದೆ.




