ಮಳೆಗಾಲದಲ್ಲಿ ತರಕಾರಿಗಳನ್ನು ಹೀಗೆ ಸಂಗ್ರಹಿಸಬಹುದು!

ಪವಿತ್ರಾ ಶೆಟ್ಟಿ
ಮಳೆಗಾಲದಲ್ಲಿ ಪದೇಪದೇ ತರಕಾರಿಗಳನ್ನು ತರಲು ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ತರಕಾರಿಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ಆದರೆ ಇವು ಬಹುಬೇಗ ಹಾಳಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ತರಕಾರಿ ಕೆಡದಂತೆ ಎಚ್ಚರವಹಿಸುವುದು ಹೇಗೆಂದು ನೋಡೋಣ.
ಮೊದಲು ನೀವು ಮಾರುಕಟ್ಟೆಯಿಂದ ತಂದ ಹಣ್ಣು-ತರಕಾರಿಗಳನ್ನು ಸ್ವಚ್ಛವಾಗಿ ತೊಳೆಯಿರಿ. ಕೇವಲ ನೀರಿನಲ್ಲಿ ಮುಳುಗಿಸಿ ತೆಗೆದರೆ ಸಾಲದು. ಉಜ್ಜಿ ತೊಳೆಯುವುದು ಒಳ್ಳೆಯದು.
ಇನ್ನು ಮಳೆಗಾಲದಲ್ಲಿ ಖರೀದಿಸುವಾಗ ಈಗಾಗಲೇ ಕತ್ತರಿಸಿದ ತರಕಾರಿಗಳನ್ನು ಕೊಳ್ಳದಿರಿ. ಕುಂಬಳಕಾಯಿ, ಸೋರೆಕಾಯಿ ಇಲ್ಲವೇ ನುಗ್ಗೆಕಾಯಿ ಯನ್ನು ಕತ್ತರಿಸಿಕೊಂಡು ತಂದರೆ, ಇದರಲ್ಲಿ ಬ್ಯಾಕ್ಟೀರಿಯಾಗಳು ಬಹುಬೇಗ ಸೇರಿ ಸೇರಿಕೊಳ್ಳುವುದು ಮಾತ್ರವಲ್ಲ ಆ ತರಕಾರಿ ಹಾಳಾಗುವ ಸಾಧ್ಯತೆ ಹೆಚ್ಚು.
ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು ತರಕಾರಿಗಳಿಗೆ ಆದ್ಯತೆ ನೀಡಿ. ಔಷಧೀಯ ಅಂಶವಿರುವ ಅರಿಶಿನ, ಶುಂಠಿ, ಕಾಳುಮೆಣಸುಗಳನ್ನು ಅಡುಗೆಗಳಲ್ಲಿ ಧಾರಾಳವಾಗಿ ಬಳಸಿ.
ಇನ್ನು ತರಕಾರಿಗಳನ್ನು ಚೆನ್ನಾಗಿ ಒರೆಸಿ ಫ್ರಿಜ್ಜಿನಲ್ಲಿಡಿ. ಸೊಪ್ಪುಗಳನ್ನು ಟಿಶ್ಯು ಪೇಪರ್ ನಲ್ಲಿ ಸುತ್ತಿಡಲು ಮರೆಯದಿರಿ.




