ವೃದ್ಧೆ ಬದುಕಿರುವಾಗಲೇ ಮರಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಯತ್ನ!

ಚಿಕ್ಕಮಗಳೂರು: ವೃದ್ಧೆಯೋರ್ವರು ಜೀವಂತವಿರುವಾಗಲೇ ಆರೋಗ್ಯಾಧಿಕಾರಿ ಮರಣ ಪ್ರಮಾಣಪತ್ರ ನೀಡಿ, ಅಕ್ರಮವಾಗಿ ಆಸ್ತಿ ಕಬಳಿಸಲು ಅವಕಾಶ ಮಾಡಿಕೊಟ್ಟಿರುವ ಸಿನಿಮೀಯ ಘಟನೆ ಎನ್.ಆರ್.ಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಎನ್ ಆರ್ ಪುರ ಪಟ್ಟಣದ ನಿವಾಸಿ ಸಾರಮ್ಮ ಎಂಬ ವೃದ್ಧೆಯೋರ್ವರ ಮರಣ ಪ್ರಮಾಣಪತ್ರ ಸೃಷ್ಟಿಸಿರುವ ಸಂಬಂಧಿಕರು ಆಸ್ತಿ ಕಬಳಿಸಲು ಯತ್ನ ಮಾಡಿದ್ದಾರೆ ಎನ್ನಲಾಗಿದ್ದು ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ತಾಲ್ಲೂಕಿನ ಬಾಳೆಕೊಪ್ಪ ಗ್ರಾಮದ ಸ.ನಂ.26ರಲ್ಲಿ 1-16 ಎಕರೆಯಲ್ಲಿ ರಬ್ಬರ್, ಬಾಳೆ ಇತ್ಯಾದಿ ಬೆಳೆ ಬೆಳೆದಿರುವ ಸಾರಮ್ಮ ಇತ್ತೀಚೆಗೆ ಕೋವಿಡ್ ಪಾಸಿಟೀವ್ ಬಂದಿದ್ದರಿಂದ ಮಗಳ ಮನೆಗೆ ಹೋಗಿದ್ದರು. ಈ ವೇಳೆ ಜಮೀನನ್ನು ಸಂಬಂಧಿಕರೋರ್ವರಿಗೆ ಉಳುಮೆ ಮಾಡಲು ಹೇಳಿ ಹೋಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಸಂಬಂಧಿ ಬಾಬು ಮತ್ತು ಶ್ರೀಜಾ ಸೇರಿ ನಕಲಿ ದಾಖಲೆ ಸೃಷ್ಟಿಸಿ ಅಜ್ಜಿಯ ಜಮೀನು ಕಬಳಿಸಲು ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ.
ಆರೋಗ್ಯಾಧಿಕಾರಿಗಳಿಂದ ಮರಣ ಪತ್ರ ಪಡೆದಿರುವುದಲ್ಲದೆ, ಮರಣ ಹೊಂದಿರುವಂತೆ ವಂಶವೃಕ್ಷ ಸಹ ತಾಲ್ಲೂಕು ಕಚೇರಿಯಿಂದ ಪಡೆದಿದ್ದಾರೆ. ಹೀಗಿರುವಾಗ ವೃದ್ಧೆ ಸಾರಮ್ಮ ಗ್ರಾಮಕ್ಕೆ ಹಿಂತಿರುಗಿ ನ್ಯಾಯಬೆಲೆ ಅಂಗಡಿಗೆ ಪಡಿತರಕ್ಕಾಗಿ ಹೋದಾಗ ರೇಷನ್ ಕಾರ್ಡ್ ಸ್ಥಗಿತಗೊಂಡಿರುವುದಾಗಿ ತಿಳಿಸಿದಾಗ ಸಾರಮ್ಮ ತಾಲ್ಲೂಕು ಕಚೇರಿಗೆ ಹೋಗಿ ವಿಚಾರಿಸಿದ್ದಾರೆ.
ಆಗ ತಾನು ಮರಣ ಹೊಂದಿರುವುದಾಗಿ ಪ್ರಮಾಣಪತ್ರ ಸೃಷ್ಟಿಸಿರುವುದು ಬಯಲಿಗೆ ಬಂದಿದೆ. ಅಲ್ಲದೆ ಬಾಬು ಮತ್ತು ಶ್ರೀಜಾ ನಕಲಿ ದಾಖಲೆ ಸೃಷ್ಟಿಸಿ ಪೌತಿ ಖಾತೆಗೂ ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಜ್ಜಿ ಬದುಕಿರುವಾಗಲೇ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಯತ್ನ ಮಾಡಿರುವುದಲ್ಲದೇ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಜಮೀನಿನ ವಿಷಯದಲ್ಲಿ ಬಂದರೆ ನಿಮ್ಮನ್ನು ಉಳಿಸುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಸಾರಮ್ಮ ಆಪಾದಿಸಿದ್ದಾರೆ.



