ಹೊನ್ನಾವರ: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೂರು ಲಕ್ಷ ರೂ. ವಂಚನೆ

ಕಾರವಾರ : ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನೊಬ್ಬನಿಗೆ ಬರೋಬ್ಬರಿ ಮೂರು ಲಕ್ಷ ರೂ.ಹಣವನ್ನು ವಂಚಿಸಿದ ಘಟನೆ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಬೆಳಕಿಗೆ ಬಂದಿದೆ.
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಕ್ಕಿಮನೆ ಬಸ್ರೂರು ಗ್ರಾಮದ ನಿವಾಸಿಯಾದ ರಾಘವೇಂದ್ರ ಗೋವಿಂದ ಪೂಜಾರಿ ಎಂಬಾತನೇ ಕವಲಕ್ಕಿ ಯುವಕನಿಗೆ ವಂಚಿಸಿದ ಆರೋಪಿಯಾಗಿದ್ದಾನೆ.ಈತ ಹೊನ್ನಾವರ ತಾಲೂಕಿನ ಕವಲಕ್ಕಿಯ 23 ವರ್ಷ ವಯಸ್ಸಿನ ಸುಬ್ರಹ್ಮಣ್ಯ ಶ್ರೀಪಾದ ಶೇಟ್ ಎಂಬುವವರಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಮೂರು ಲಕ್ಷ ರೂ.ಹಣವನ್ನು ಪಡೆದಿದ್ದ ಎನ್ನಲಾಗಿದೆ.
ಆರೋಪಿ ರಾಘವೇಂದ್ರ ಗೋವಿಂದ ಪೂಜಾರಿ ಕವಲಕ್ಕಿಯ ಸುಬ್ರಹ್ಮಣ್ಯ ಶ್ರೀಪಾದ ಶೇಟ್ ಅವರ ಮಾವನವರ ಮೂಲಕ 2019 ರಲ್ಲಿ ಪರಿಚಯವಾಗಿದ್ದನು. ಸುಬ್ರಹ್ಮಣ್ಯ ಅವರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸವನ್ನು ಕೊಡಿಸುತ್ತೇನೆ.ಅದಕ್ಕೆ ಒಟ್ಟೂ ಏಳು ಲಕ್ಷ ರೂ.ಖರ್ಚಾಗುತ್ತದೆ.ಮುಂಗಡವಾಗಿ ಮೂರು ಲಕ್ಷ ರೂ. ಹಣವನ್ನು ಕೊಡಬೇಕು.ನಂತರ ನೌಕರಿ ಸಿಕ್ಕ ಬಳಿಕ ಅಂದರೆ ಆದೇಶ ಪತ್ರ ಬಂದ ನಂತರ ಉಳಿದ ಹಣವನ್ನು ನೀಡಬೇಕು ಎಂದು ನಂಬಿಸಿದ್ದಾನೆ.
ಹೀಗೆ ನಂಬಿಸಿದ ರಾಘವೇಂದ್ರ ಪೂಜಾರಿ ಕವಲಕ್ಕಿಯ ಸುಬ್ರಹ್ಮಣ್ಯ ಶೇಟ್ ಅವರ ಬಳಿಯಿಂದ ಹಾಗೂ ಅವರ ತಾಯಿ ವಿಜಯಾ ಶೇಟ್ ಅವರಿಂದ ಕುಂದಾಪುರ ಶಾಖೆಯ ತನ್ನ ಹೆಚ್.ಡಿ.ಎಫ್.ಸಿ ಖಾತೆಗೆ ಕ್ರಮವಾಗಿ 50 ಸಾವಿರ,80 ಸಾವಿರ ಹಾಗೂ 10 ಸಾವಿರ ರೂಪಾಯಿ ಹಣವನ್ನು ನೆಫ್ಟ್ ಮೂಲಕ ವರ್ಗಾಯಿಸಿಕೊಂಡಿದ್ದಾನೆ.ಇದಲ್ಲದೆ 2019 ರ ಮೇ ತಿಂಗಳ 25 ರಂದು ಕವಲಕ್ಕಿಯ ಸುಬ್ರಹ್ಮಣ್ಯ ಅವರ ಮನೆಯಲ್ಲಿ ಆರೋಪಿ ರಾಘವೇಂದ್ರ ಪೂಜಾರಿ ಖುದ್ದಾಗಿ ಬಂದು ಸುಬ್ರಹ್ಮಣ್ಯ ಅವರ ತಾಯಿಯವರ ಕಡೆಯಿಂದ 1,60,000 ರೂ.ನಗದು ಹಣವನ್ನು ಪಡೆದುಕೊಂಡಿದ್ದಾನೆ.ಹೀಗೆ ಒಟ್ಟೂ ಮೂರು ಲಕ್ಷ ರೂ.ಹಣವನ್ನು ವಂಚಿಸಿದ್ದಾನೆ ಎಂದು ಕವಲಕ್ಕಿಯ ಸುಬ್ರಹ್ಮಣ್ಯ ಶೇಟ್ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇನ್ನು ವಂಚನೆಗೊಳಗಾದ ಸುಬ್ರಹ್ಮಣ್ಯ ಅವರಿಗೆ ಈವರೆಗೂ ನೌಕರಿಯನ್ನು ಕೊಡಿಸದೇ ಮೂರು ಲಕ್ಷ ರೂ.ಹಣವನ್ನು ಹಿಂತಿರುಗಿಸದೇದೇ ಮೋಸ ಮಾಡಿದ ಕುರಿತು ರಾಘವೇಂದ್ರ ಪೂಜಾರಿ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ದೂರು ದಾಖಲಾಗಿದೆ.




