ವಾಂತಿ ಬೇದಿಯಿಂದ 14 ಶಾಲಾ ಮಕ್ಕಳು ಅಸ್ವಸ್ಥ ಆಸ್ಪತ್ರೆಗೆ ದಾಖಲು

ಮೈಸೂರು: ಮೈಸೂರಿನಲ್ಲಿ ಹಲವು ದಿನಗಳಿಂದಲೂ ಎಡಬಿಡದೇ ಸುರಿಯುತ್ತಿರುವ ಮಳೆಗೆ 14 ಮಂದಿ ಶಾಲಾ ಮಕ್ಕಳು ವಾಂತಿ, ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಚ್.ಡಿ.ಕೋಟೆ ತಾಲೂಕಿನ ಮಹದೇಶ್ವರ ಕಾಲೋನಿಯ ಮಕ್ಕಳು ಕಲುಷಿತ ನೀರು ಅಥವಾ ಆಹಾರ ಸೇವಿಸಿ ಅಸ್ವಸ್ಥರಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಶಾಲೆಯಲ್ಲಿ ಹಾಲು ಕುಡಿದ ಪರಿಣಾಮ ಮಕ್ಕಳು ಅಸ್ವಸ್ಥಗೊಂಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಮಾಹಿತಿ ಸಂಗ್ರಹಿಸುತ್ತಿದ್ದಾಗ, ಶಿಕ್ಷಕರೊಡನೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದ್ದಾರೆ. ಅನಂತರ ಗ್ರಾಮದ ನೀರಿನ ಮಾದರಿ ಸಂಗ್ರಹಿಸಿ ಆರೋಗ್ಯ ಇಲಾಖೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಮಕ್ಕಳ ಸ್ಥಿತಿ ಕಂಡು ಆತಂಕಗೊಂಡ ಪೋಷಕರು ತಮ್ಮ ಭುಜದ ಮೇಲೆ ಹೊತ್ತು, ಆಸ್ಪತ್ರೆ ಆವರಣದಲ್ಲಿ ಓಡಾಡಿದ್ದಾರೆ. ಆಗ ಮಕ್ಕಳ ಆರೋಗ್ಯದ ಬಗ್ಗೆ ಭಯಪಡದಂತೆ ವೈದ್ಯರು ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಮಳೆ ಹೆಚ್ಚಾಗಿ ಬೀಳುತ್ತಿದ್ದು, ಶೀತದ ವಾತಾವರಣ ಹೆಚ್ಚಾಗಿರುವುದರಿಂದ ಮಕ್ಕಳಿಗೆ ಅನಾರೋಗ್ಯ ಕಾಣಿಸಿಕೊಂಡಿದೆ.




