ಕಾರವಾರದ ಅಮದಳ್ಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಶ್ರೀಪಾದ ನಾಯ್ಕ

ಕಾರವಾರ : ಬಂದರು ಮತ್ತು ಒಳನಾಡು ಜಲ ಸಾರಿಗೆ ಮತ್ತು ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಶ್ರೀಪಾದ ನಾಯ್ಕ ಬುಧವಾರ ಅಷ್ಟಸಿದ್ಧಿವಿನಾಯಕ ಹಾಗೂ ಗಾಯತ್ರಿ ದೇವರ ನೂತನ ದೇವಾಲಯದ ಶಂಕುಸ್ಥಾಪನೆ ನಡೆಸಿದರು.
ಬೃಹತ್ ಕಲ್ಲಿನ ರೂಪದಲ್ಲಿ ಉದ್ಭವಗೊಂಡಿರುವ ಅಷ್ಟಸಿದ್ಧಿವಿನಾಯಕ ಹಾಗೂ ಗಾಯತ್ರಿ ದೇವಿಗೆ ದೇವಾಲಯ ನಿರ್ಮಾಣವಾಗುತ್ತಿದೆ.ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ದೇವಸ್ಥಾನಕ್ಕೆ ಕೇಂದ್ರ ಸಚಿವರು ಆಗಮಿಸುತ್ತಿದ್ದಂತೆ ಚೆಂಡೆ ಹಾಗೂ ಕಲಶದಿಂದ ಸ್ಥಳೀಯರು ಸ್ವಾಗತ ಕೋರಿದರು.
ದೇವರಿಗೆ ಪೂಜೆ ಸಲ್ಲಿಸಿ ಹೋಮ,ಹವನಗಳಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಅವರಿಗೆ ಕಾರವಾರ – ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಸಾಥ್ ನೀಡಿದರು.
ಕಾರ್ಯಕ್ರಮದ ನಡುವೆ ಮಾಧ್ಯಮದ ಜತೆ ಮಾತನಾಡಿದ ಅವರು,ದೇವಳದ ಶಂಕುಸ್ಥಾಪನೆಗೆ ಆಗಮಿಸಿದ್ದೇನೆ.ವಿಮಾನ ನಿಲ್ದಾಣ ಸಂತ್ರಸ್ತರಿಗೆ ಜಾಗ ನೀಡುವಲ್ಲಿ ನಡುಬೇಣದ ನಿವಾಸಿಗಳ ಅಸಮಾಧಾನವನ್ನು ಪರಿಹರಿಸಲಾಗುವುದು. ಜನರಿಗೆ ಯಾವುದೇ ಸಮಸ್ಯೆಯಿದ್ದರೂ ನನ್ನನ್ನು ಭೇಟಿಯಾಗಲಿ.ಅದನ್ನು ನಾನು ಫಾಲೋಅಪ್ ಮಾಡ್ತೇನೆ.ಏನೇ ವಿಚಾರವಿದ್ದರೂ ಮೀನುಗಾರರು ನನ್ನನ್ನು ಸಂಪರ್ಕಿಸಲಿ ಎಂದರು.
ಸಾಗರಮಾಲಾ ಯೋಜನೆಗೆ ಮೀನುಗಾರರಿಂದ ವಿರೋಧ ವಿಚಾರವಾಗಿ ಮಾತನಾಡಿದ ಅವರು,ಯೋಜನೆಯ ಬಗ್ಗೆ ನಾವು ಮೀನುಗಾರರೊಂದಿಗೆ ಕುಳಿತು ಮಾತನಾಡಬೇಕಿದೆ.ಈ ಮೂಲಕ ಮೀನುಗಾರರ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ.ಸಾಗರಮಾಲಾ ಯೋಜನೆ ಜನರ ಒಳಿತಿಗಾಗಿಯೇ ಇರೋದು. ಮೀನುಗಾರರು ಯಾವ ವಿಚಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸ್ತಾರೋ ಅದನ್ನು ಮಾಡಲ್ಲ.ಜನರು ಯೋಜನೆಯ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಬೇಕಿದೆ. ಈ ವಿಚಾರದ ಬಗ್ಗೆ ನಾವು ಖುದ್ದಾಗಿ ಪರಿಶೀಲನೆ ನಡೆಸುವುದಾಗಿ ಸಚಿವ ಶ್ರೀಪಾದ ನಾಯ್ಕ ತಿಳಿಸಿದರು.




