3ನೇ ಅಲೆ ನಿಯಂತ್ರಿಸಲು ವಿದ್ಯಾರ್ಥಿಗಳು ಲಸಿಕೆ ಪಡೆಯುವಂತೆ ಸಲಹೆ

ರಾಮನಗರ: ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ವತಿಯಿಂದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ್ತು ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳಿಗೆ, ಭೋಧಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಲಸಿಕಾ ಶಿಬಿರ ಆಯೋಜಿಸಲಾಗಿತ್ತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶಶಿಕಲಾ ಶಿಬಿರಕ್ಕೆ ಭೇಟಿನೀಡಿ ವಿದ್ಯಾರ್ಥಿಗಳು ಪೋಷಕರು ಲಸಿಕೆ ಪಡೆಯುವಂತೆ ಪ್ರೆರೇಪಿಸಬೇಕು, ಇದರಿಂದ ಮಕ್ಕಳಲ್ಲಿ ೩ ನೇ ಅಲೆಯ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್ ಗಂಗಾಧರ್ ಅವರು ಲಸಿಕಾ ಶಿಬಿರಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ಮಾಡಿದರು. ನಂತರ ಮಾತನಾಡಿ ಕೋವಿಡ್ ೩ ನೇ ಅಲೆಯನ್ನು ನಿಯಂತ್ರಿಸಲು ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು, ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಜೊತೆಗೆ ಸೋಂಕು ನಿಯಂತ್ರಿಸಲು ಮಾಸ್ಕ್, ಸ್ಯಾನಿಟೈಜರ್ ಬಳಕೆ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸರ್ಕಾರದ ಮಾರ್ಗಸೂಚಿ ಅನ್ವಯ ಶಿಕ್ಷಣ ಪಡೆಯಬಹುದೆಂದು ಸಲಹೆ ನೀಡಿದರು.
ಶಿಬಿರದಲ್ಲಿ ಡಾ. ಹರ್ಷಿತ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಕಾಂತರಾಜು, ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಮುದ್ದೀರಯ್ಯ , ಮೇಲ್ವಿಚಾರಕರಾದ ಪ್ರಸನ್ನ ಕುಮಾರಿ, ಶಂಭುಲಿಂಗಯ್ಯ, ಆರೋಗ್ಯ ಸಿಬ್ಬಂದಿಗಳಾದ ಸುಮಲತಾ, ಮಮತಾ, ಕವಿತಾ, ದೀಪಾ ಹಾಜರಿದ್ದರು.




