ಅನುದಾನ ದುರ್ಬಳಕೆ ಆರೋಪ: ಬೀದಿಗೆ ಇಳಿದು ಪ್ರತಿಭಟಿಸಿದ ಗ್ರಾಪಂ ಸದಸ್ಯರು

ಕಲಬುರಗಿ: ಚಿತ್ತಾಪುರ ತಾಲೂಕಿನ ಕಮರವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಪಿಡಿಓ ಸೇರಿ ಅಭಿವೃದ್ದಿ ಕಾಮಗಾರಿ ಹೆಸರಿನಲ್ಲಿ 14 ಲಕ್ಷ ರೂಪಾಯಿ ಸರ್ಕಾರಿ ಅನುದಾನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸ್ವತಃ ಗ್ರಾಮ ಪಂಚಾಯತ್ ಸದಸ್ಯರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಮೂರು ತಿಂಗಳ ಹಿಂದಷ್ಟೆ ಕಮರವಾಡಿ ಗ್ರಾಪಂ ಅಧ್ಯಕ್ಷೆಯಾಗಿ ಅಧಿಕಾರ ಹಿಡಿದ ಸರೋಜಿನಿ ದೇಶಮುಖ ಮತ್ತು ಪಿಡಿಓ ಅಧಿಕಾರಿ ಶೇಖಪ್ಪ ಇಬ್ಬರು ಸೇರಿ, ರಸ್ತೆ ದುರಸ್ಥೆ, ಬೀದಿ ದೀಪ, ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 14 ಲಕ್ಷ ರೂಪಾಯಿ ಹಣ ಲಪಟಾಯಿಸಿದ್ದಾರೆಂದು ಸದಸ್ಸರು ಆರೋಪಿಸಿದ್ದಾರೆ.
ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಇಲ್ಲಿವರೆಗೆ ಯಾವುದೆ ಪ್ರಯೋಜನವಾಗಿಲ್ಲ, ತಕ್ಷಣ ಪಿಡಿಓ ಅಧಿಕಾರಿ ಶೇಖಪ್ಪ ಅವರನ್ನು ಅಮಾನತ್ತು ಮಾಡಿ ತನಿಖೆ ನಡೆಸಬೇಕು. ಗ್ರಾ.ಪಂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮೂರು ತಿಂಗಳಿನಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗ ಮಾಡಿಕೊಂಡ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿದರು.




