ಮಾಜಿ ಸಿಎಂ ದಲಿತ ವಿರೋಧಿ ಎಂದು ಬಿಂಬಿಸುತ್ತಿರುವುದು ಹಾಸ್ಯಾಸ್ಪದ: ರಾಜು.ಎಸ್.ಮನ್ನಿಕೇರಿ

ಬಾಗಲಕೋಟೆ: ಬಿ.ಎಸ್.ಯಡಿಯೂರಪ್ಪ ಡಿಸಿಎಂಯಾದ ತಕ್ಷಣ ತಮ್ಮ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರವನ್ನು ತೆಗೆದು ಹಾಕಿ ಅವಮಾನಿಸಿದ ಸಂದರ್ಭದಲ್ಲಿ ಬಿಜೆಪಿ ದಲಿತ ಮುಖಂಡರು ಯಾಕೆ ಮೌನವಾಗಿದ್ದರು. ರಾಜ್ಯದಲ್ಲಿ ದಲಿತ ಯುವತಿಯರ ಮೇಲೆ ಅತ್ಯಾಚಾರ ನಡೆದಾಗ ಮಾತನಾಡದ ಬಿಜೆಪಿ ಮುಖಂಡರು ಇದೀಗ ಸಿದ್ಧರಾಮಯ್ಯ ದಲಿತ ವಿರೋಧಿ ಎಂದು ಬಿಂಬಿಸುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಎಸ್.ಸಿ.ವಿಭಾಗದ ಜಿಲ್ಲಾಧ್ಯಕ್ಷ ರಾಜು.ಎಸ್.ಮನ್ನಿಕೇರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು.ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ನಾಯಕರು ಆರೋಪಿಸುತ್ತಿರುವುದು ಸರಿಯಲ್ಲ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಲಿತರಿಗಾಗಿ 24 ಸಾವಿರ ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ದಲಿತ ಹಿಂದುಳಿದ ವರ್ಗಗಳಿಗಾಗಿ ಅನೇಕ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ಸಿದ್ದರಾಮಯ್ಯ ದಲಿತ ವಿರೋಧಿ ಹೇಗೆ ಆಗುತ್ತಾರೆ ಎಂದು ಬಿಜೆಪಿ ಮುಖಂಡರು ಉತ್ತರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ: ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ನೇರ ಸಾಲ ಯೋಜನೆಯಲ್ಲಿ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಸಾಲದಿಂದ ಬಳಲಬಾರದು ಎಂಬ ಉದ್ದೇಶದಿಂದ ಸಂಪೂರ್ಣ ಸಾಲ ಮನ್ನಾ ಮಾಡಿದ ಶ್ರೇಯಸ್ಸು ಸಿದ್ದರಾಮಯ್ಯರಿಗೆ ಸಲ್ಲುತ್ತದೆ. ದಲಿತ,ಎಸ್ ಸಿ ಎಸ್ಟಿಯವರಿಗೆ ಮೀಸಲಾದ ಅನುದಾನವನ್ನು ಸಕಾಲದಲ್ಲಿ ಖರ್ಚು ಮಾಡದೇ ಇರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವ ಕಾನೂನು ಜಾರಿ ಮಾಡಿದ್ದಾರೆ ಎಂದರು.
ಇನ್ನು ಎಸ್ಸಿ/ಎಸ್ಟಿ ಗುತ್ತಿಗೆದಾರರಿಗೆ ಶೇ.18 ರಷ್ಟು ಕಾಮಗಾರಿ ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ.ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ ಆದಿ ಜಾಂಭವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರು. ಇಷ್ಟೆಲ್ಲಾ ದಲಿತರಿಗಾಗಿ ಅಭಿವೃದ್ಧಿ ಕೆಲಸ ಮಾಡಿರುವ ಸಿದ್ಧರಾಮಯ್ಯನವರು ದಲಿತ ವಿರೋಧಿ ಹೇಗೆ ಆಗುತ್ತಾರೆ ಎಂಬುದನ್ನು ಬಿಜೆಪಿಯಲ್ಲಿರುವ ಎಸ್.ಸಿ./ ಎಸ್.ಟಿ.ನಾಯಕರು ಉತ್ತರಿಸಬೇಕು.ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದ ಗೋವಿಂದ ಕಾರಜೋಳರನ್ನು ಡಿಸಿಎಂ ಹುದ್ದೆಯಿಂದ ಕೈಬಿಟ್ಟಾಗ ಮಾತನಾಡಲಿಲ್ಲ, ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನು ಡಿಸಿಎಂ ಮಾಡುವ ಭರವಸೆ ನೀಡಿದ್ದರು.ಆದರೆ ಬಿಜೆಪಿ ಸರ್ಕಾರದಲ್ಲಿ ಅವರಿಗೆ ಕೊಟ್ಟ ಹುದ್ದೆ ಯಾವುದು ಎನ್ನುವದನ್ನು ದಲಿತ ಬಿಜೆಪಿ ಮುಖಂಡರು ಉತ್ತರಿಸಬೇಕು ಎಂದು ಛೇಡಿಸಿದರು.
ದಲಿತರ ಪರವಾಗಿ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ದಲಿತ ವಿರೋಧಿ ಎಂಬ ಪದವನ್ನು ಬಳಸುತ್ತಿರುವುದು ನಾಚಿಗೇಡಿತನ ಸಂಗತಿಯಾಗಿದೆ. ಇದೇ ರೀತಿ ಮುಖಂಡರು ಮಾತನ್ನು ಮುಂದೆವರಿಸದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಗ್ರಾ.ಪಂ. ಮಟ್ಟದಲ್ಲಿ ಸಿದ್ಧರಾಮಯ್ಯನವರು ದಲಿತರಿಗಾಗಿ ಮಾಡಿದ ಸಾಧನೆಗಳನ್ನು ಪ್ರಣಾಳಿಕೆ ರೂಪದಲ್ಲಿ ಬಿಡುಗಡೆಗೊಳಿಸಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಪ್ರತಿ ಹಳ್ಳಿ ಹಳ್ಳಿಗಳಿಗೂ ಮುಟ್ಟುವಂತೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಮಾಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಾಧ್ಯಮ ವಕ್ತಾರ ನಾಗರಾಜ ಹದ್ದಿ, ಬೀಳಗಿ ಬ್ಲಾಕ್ ಕಾಂಗ್ರೆಸ್ ಎಸ್ಸಿ, ವಿಭಾಗದ ಅಧ್ಯಕ್ಷ ಬಸವರಾಜ ಹಳ್ಳದಮನಿ, ಶಫಿಕ್ ದೊಡಕಟ್ಟಿ ಆರ್.ಡಿ.ಬಾಬು ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮುಖಂಡರಾದ ಸಿದ್ದು ಮಾದರ, ವೈ.ವೈ. ತಿಮ್ಮಾಪೂರ, ಪ್ರೇಮನಾಥ ಗರಸಂಗಿ, ಶ್ರವಣ ಖಾತೇದಾರ, ಕಡಪ್ಪ ಬೈರಮಟ್ಟಿ, ರಾಜು ರಾಠೋಡ ಇದ್ದರು.




