ಅಂಕಣಗಳುಸಂಪಾದಕೀಯ

ರಾಜಕಾರಣದಲ್ಲಿ ಭ್ರಷ್ಟಾಚಾರ; ಬೆಕ್ಕಿಗೆ ಗಂಟೆ ಕಟ್ಟುವವರಾರು?

“ಇಂದು ಎಲ್ಲೆಡೆ ರಾಜಕೀಯ ಧ್ರವೀಕರಣವಾಗಿದೆ. ಇಂದು ಶಾಸನಗಳನ್ನು ಮಾಡುವ ನಾವೇ ಭ್ರಷ್ಟರಾಗಿದ್ದೇವೆ. ನಾವು ಅಧಿಕಾರಿಗಳನ್ನೂ ಭ್ರಷ್ಟರನ್ನಾಗಿ ಮಾಡಿದ್ದೇವೆ. ನಾವೆಲ್ಲರೂ ಸೇರಿ ಚುನಾವಣೆಯಲ್ಲಿ ಮತ ಹಾಕುವ ಜನರನ್ನೂ ಸಹ ಭ್ರಷ್ಟರನ್ನಾಗಿ ಮಾಡಿದ್ದೇವೆ. ಇದು ತುಂಬಾ ದುರಾದೃಷ್ಟ. ಇಂದು ನಿಜವಾಗಲೂ ಸಮಾಜಸೇವೆ ಮಾಡಲಿಚ್ಛಿಸುವವರಿಗೆ ರಾಜಕೀಯದಲ್ಲಿ ಯಾವುದೇ ಅವಕಾಶಗಳು ಸಿಗುತ್ತಿಲ್ಲ. ಅದೇ ಹಣವಿರುವ ಶ್ರೀಮಂತರಿಗೆ ರಾಜಕೀಯದಲ್ಲಿ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದೆ. ಇದು ತೀರ ದುರಾದೃಷ್ಟಕರ. ಇದಕ್ಕೆ ಕಡಿವಾಣ ಹಾಕಬೇಕು”

ಹೀಗೆಂದು ಹೇಳಿದ್ದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ. ಇಂದು ನಡೆದ ಸದನದ ಕಲಾಪದಲ್ಲಿ ನೇರವಾಗಿ ಸದನದಲ್ಲಿದ್ದ ತಮ್ಮನ್ನೂ ಸೇರಿದಂತೆ ಎಲ್ಲ ಶಾಸಕರ ಮೇಲೂ ಶಾಸಕ ರಾಜೇಗೌಡ ಈ ಆರೋಪ ಮಾಡಿದರು. ವಿಚಿತ್ರವೆಂದರೆ ಇಂಥ ಕಠೋರ ಸತ್ಯವನ್ನು ತಮ್ಮ ವಿರುದ್ಧವೇ ಹೇಳಿದರೂ ಯಾವೊಬ್ಬನೇ ಶಾಸಕನೂ ಇದನ್ನು ಸುಳ್ಳು ಎಂದಾಗಲಿ, ಆಕ್ಷೇಪಿಸುವುದಾಗಲಿ ಮಾಡಲಿಲ್ಲ. ಆಡಳಿತ ಮತ್ತು ವಿಪಕ್ಷದ ಎಲ್ಲ ಸದಸ್ಯರೂ ಅವರ ಮಾತು ಸತ್ಯವೆಂಬಂತೆ ತಲೆಯಾಡಿಸುತ್ತ ಕುಳಿತಿದ್ದರು.

ನಿಜ ಹೇಳಬೇಕೆಂದರೆ ರಾಜುಗೌಡ ಹೇಳಿದ್ದರಲ್ಲಿ ಎಳ್ಳಷ್ಟೂ ಸುಳ್ಳಿಲ್ಲ. ಸದನದಲ್ಲಿರುವ ಮುಕ್ಕಾಲುಪಾಲು ಸದಸ್ಯರು ಭ್ರಷ್ಟತೆಯ ಪರಾಕಾಷ್ಠೆಯನ್ನು ತಲುಪಿರುವವರೆ! ಇದನ್ನು ಅವರುಗಳೇ ಮೌನವಾಗಿ ‘ಮೌನಂ ಸಮ್ಮತಿ ಲಕ್ಷಣಂ’ ಎಂಬಂತೆ ಒಪ್ಪಿಕೊಂಡ ಮೇಲೆ ಅವರೆಲ್ಲರ ಮೇಲೆ ತಕ್ಷಣ ಕ್ರಮ ಕೈಗೊಂಡು, ಎಲ್ಲರನ್ನೂ ಜೈಲಿಗೆ ಕಳುಹಿಸಬೇಕಲ್ಲವೆ? ಆದರೆ ಈ ಕೆಲಸವನ್ನು ಮಾಡಬೇಕಾದವರು ಯಾರು? ಸರ್ಕಾರವನ್ನು ನಡೆಸುತ್ತಿರುವ, ಅದರಲ್ಲಿರುವ ಎಲ್ಲರೂ ಭ್ರಷ್ಟರಾಗಿರುವಾಗ ಯಾರು ಯಾರನ್ನು ಜೈಲಿಗೆ ಕಳುಹಿಸಬೇಕು? ಮುಂದಿನ ಚುನಾವಣೆಯಲ್ಲಿ ಬದಲಾವಣೆ ಮಾಡೋಣವೆಂದುಕೊಂಡರೆ ಚುನಾವಣೆಯಲ್ಲೂ ಈ ಭ್ರಷ್ಟರು ತಮ್ಮ ಭ್ರಷ್ಟಾಚಾರದಿಂದ ಗೆದ್ದು ಬರುವುದಿಲ್ಲವೆಂದು ಏನು ಗ್ಯಾರೆಂಟಿ?

ಸಭಾದ್ಯಕ್ಷ ಕಾಗೇರಿಯವರು ಸದನದಲ್ಲಿ 3 ಗಂಭೀರವಾದ ವಿಷಯಗಳ ಮೇಲೆ ಚರ್ಚೆಗೆ ಅವಕಾಶ ನೀಡಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಪುಸ್ತಕವನ್ನು ಸುಟ್ಟುಹಾಕುತ್ತೇವೆ ಎಂದು ಹೇಳುವ ದೇಶದ್ರೋಹಿಗಳ ಹೇಳಿಕೆಯ ಬಗ್ಗೆ ಹಾಗೂ ಒಂದು ದೇಶ ಒಂದು ಚುನಾವಣೆ ಮತ್ತು ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಎಂಬ ಪ್ರಮುಖ 3 ವಿಷಯಗಳ ಬಗ್ಗೆ ಚರ್ಚಿಸಲು ಸಭಾಧ್ಯಕ್ಷರು ಅವಕಾಶ ಕೊಟ್ಟಿದ್ದರು. ಹಾಗೆ ನೋಡಿದರೆ ಈ ಮೂರು ಇಂದು ಮಾಧ್ಯಮಗಳು ಚರ್ಚಿಸಬೇಕಾದ ವಿಷಯಗಳು. ಆದರೆ ಮಾಧ್ಯಮಗಳು ಜನರು ತಮ್ಮ ಬಗ್ಗೆ ಆಡಿಕೊಳ್ಳುವ ಗೋದಿ ಮೀಡಿಯಾ ಎಂಬುದನ್ನು ನಿಜ ಮಾಡುವಂತೆ ಬೇಕಿಲ್ಲದ್ದನ್ನು ತೋರಿಸುತ್ತ, ಇಂದು ಅಗತ್ಯವಾಗಿ ಜನರಿಗೆ ತಿಳಿಯಬೇಕಿರುವ ಇಂಥ ವಿಷಯಗಳನ್ನು ಗಾಳಿಗೆ ತೂರುತ್ತಿವೆ. ಆದರೆ ಭ್ರಷ್ಟರೇ ತುಂಬಿರುವ ಸದನದಲ್ಲಿ ಸಭಾದ್ಯಕ್ಷರು ಈ ಮೂರು ವಿಷಯಗಳ ಬಗ್ಗೆ ಚರ್ಚಿಸಲು ಅನುಮತಿ ನೀಡಿದ್ದು ಮಾತ್ರ ಅಭಿನಂದನೀಯ. ಸದನದಲ್ಲಿ ಸೇರಿರುವ ಶಾಸಕರಲ್ಲಿ ಕೆಲವರಾದರೂ ರಾಜಕರಾಣಿಗಳಲ್ಲಿ ಭ್ರಷ್ಟರು ತುಂಬಿ ತುಳುಕುತ್ತಿದ್ದಾರೆ, ದುಡ್ಡಿದ್ದವನೇ ಇಲ್ಲಿ ದೊಡ್ಡಪ್ಪ ಎಂಬ ಸತ್ಯವನ್ನು ಎದೆಗಾರಿಕೆಯಿಂದ ಹೇಳಿದ್ದು ಅಲ್ಲಿ ಕೆಲವರಾದರೂ ಈ ಭ್ರಷ್ಟಾಚಾರದ ಬಗ್ಗೆ ಗಂಭೀರವಾಗಿ ಯೋಚಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿ. ಇಷ್ಟರ ಮಟ್ಟಿಗಾದರೂ ನಾವು ಶಾಸಕ ರಾಜೇಗೌಡರನ್ನು ಅಭಿನಂದಿಸಲೇಬೇಕು.

ಓಂಪ್ರಕಾಶ್ ನಾಯಕ್, ಹಿರಿಯ ಉಪ ಸಂಪಾದಕರು, BMG24X7ಲೈವ್​ಕನ್ನಡ

Spread the love

Related Articles

Leave a Reply

Your email address will not be published. Required fields are marked *

Back to top button