PWD ಇಂಜಿನಿಯರ್ ಶಾಂತಗೌಡ ರಹಸ್ಯ ಭೇದಿಸಲು ಬೆಂಗಳೂರಿಗೆ ಎಸಿಬಿ ಪಯಣ

ವಿಶೇಷ ವರದಿ: ವೀರೇಶ ಚಿನಗುಡಿ
ಕಲಬುರ್ಗಿ: ಜೇವರ್ಗಿ ಪಿಡಬ್ಲ್ಯೂಡಿ ಜ್ಯೂನಿಯರ್ ಇಂಜಿನಿಯರ್ ಶಾಂತಗೌಡ ಬಿರಾದಾರ ಆಸ್ತಿ ಬಗೆದಷ್ಟು ಪತ್ತೆ ಆಗುತ್ತಲೇ ಇದೆ. ಇದೀಗ ದುಬೈನಿಂದ ಖರೀದಿಸಿದ ಚಿನ್ನದ ಗಟ್ಟಿಯ ರಹಸ್ಯ ಪತ್ತೆಯಾಗಿದೆ. ಜೇವರ್ಗಿ ಟೂ ದುಬೈ ಚಿನ್ನದ ಗಟ್ಟಿಯ ರಹಸ್ಯ ಭೇದಿಸಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ಶೋಧಕಾರ್ಯ ಮಾಡುತ್ತ ಎಸಿಬಿ ಅಧಿಕಾರಿಗಳು ಕಲಬುರ್ಗಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಶಾಂತಗೌಡ ಬಿರಾದಾರಗೆ ಸೇರಿದ ಕಲಬುರ್ಗಿಯ ಗುಬ್ಬಿ ಕಾಲೋನಿ ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿತ್ತು. ಇದು ಪತ್ತೆಯಾಗಿದ್ದು ಅಲ್ಪಸ್ವಲ್ಪ ಮಾತ್ರ, ಇರೋದೆಲ್ಲಾ ಬೆಂಗಳೂರು ಮನೆಯಲ್ಲಿದೆ. ಮಗನ ಹೆಸರಿನಲ್ಲಿ ದುಬೈನಿಂದ ಚಿನ್ನದ ಗಟ್ಟಿಯನ್ನು ಖರೀದಿಸಿರುವ ರಿಸಿಪ್ಟ್ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿದೆ. ಒಂದು ಹಂತಕ್ಕೆ ಶಾಂತಗೌಡನ ಮೂಲ ಖಜಾನೆಗೆ ಎಸಿಬಿ ಅಧಿಕಾರಿಗಳು ಇನ್ನೂ ಮುಟ್ಟೆಯಿಲ್ಲ. ಇಂದು ಶಾಂತಗೌಡನ ಬೆಂಗಳೂರಿನಲ್ಲಿರುವ ಅತಿ ದೊಡ್ಡ ಖಜಾನೆಗೆ ಎಸಿಬಿ ಅಧಿಕಾರಿಗಳು ಕೈ ಹಾಕಿದ್ದಾರೆ.
ತಂದೆಗಿಂತ ಮಗನ ಖಾತೆಯಲ್ಲಿ ಸಿಕ್ತು ಲಕ್ಷ ಲಕ್ಷ:
ಬುಧವಾರದಿಂದ ಶಾಂತಗೌಡನ ಜನ್ಮಜಾಲಾಡುತ್ತಿರುವ ಎಸಿಬಿಗೆ ಮೊದಲ ದಿನವೇ 54 ನಗದು ಮನೆಯಲ್ಲಿ ಪತ್ತೆಯಾಗಿತ್ತು. ಗುರುವಾರ ಇಡಿದಿನ ಕಲಬುರ್ಗಿಯಲ್ಲಿ ಶಾಂತಗೌಡ ಹಾಗೂ ಆತನ ಕುಟುಂಬಸ್ಥರ ಬ್ಯಾಂಕ್ ಖಾತೆಗಳನ್ನು ಜಾಲಾಡಿದ ಎಸಿಬಿಗೆ ಬ್ಯಾಂಕ್ ಖಾತೆಗಳಲ್ಲಿ ಲಕ್ಷ ಲಕ್ಷ ಇರೋದು ಪತ್ತೆಯಾಗಿದೆ. ಎಸ್ಬಿಐ, ಕೆನರಾ ಬ್ಯಾಂಕ್ ಸೇರಿದಂತೆ 16 ಬ್ಯಾಂಕ್ಗಳಲ್ಲಿ ಅಕೌಂಟ್ ಹೊಂದಿರುವ ಶಾಂತಗೌಡ ಹಾಗೂ ಆತನ ಮಗನ ವಿವಿಧ ಅಕೌಂಟ್ ನಲ್ಲಿ 50 ಲಕ್ಷ ಹಣ ಪತ್ತೆಯಾಗಿದೆ. ತಂದೆಗಿಂತ ಪುತ್ರನ ಅಕೌಂಟ್ ನಲ್ಲಿಯೇ ಅತಿ ಹೆಚ್ಚು ದುಡ್ಡು ಪತ್ತೆಯಾಗಿದೆ. ಕಲಬುರಗಿ, ಜೇವರ್ಗಿ ಮಾತ್ರವಲ್ಲದೆ ಬೆಂಗಳೂರಿನಲ್ಲಿ ಕೂಡಾ ಅನೇಕ ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ ಅನ್ನೋದು ಎಸಿಬಿ ಪತ್ತೆ ಹಚ್ಚಿದೆ.
ಎಸಿಬಿ ಕೈ ದುಬೈ ಚಿನ್ನದ ಗಟ್ಟಿ ಖರೀದಿ ರಿಸಿಪ್ಟ್:
ಕಳೆದ ನಾಲ್ಕು ವರ್ಷದಿಂದ ಶಾಂತಗೌಡನ ಕುಟಂಬ ಬೆಂಗಳೂರಿನಲ್ಲಿ ವಾಸವಿದೆ. ಅಲ್ಲಿಯ ಆಸ್ತಿ ಪತ್ತೆ ಹಚ್ಚಲು ಡಿವೈಎಸ್ಪಿ ನೇತೃತ್ವದ ತಂಡ ಬೆಂಗಳೂರು ತೆರಳಿದೆ. ಬೆಂಗಳೂರಿನ ಜಯನಗರದಲ್ಲಿರುವ ಮನೆಯಲ್ಲಿ ಅಧಿಕಾರಿಗಳು ಜಾಲಾಡಲಿದ್ದಾರೆ. ಈಗಾಗಲೇ ಮಗನ ಹೆಸರಿನಲ್ಲಿ ದುಬೈನಿಂದ ಚಿನ್ನದ ಗಟ್ಟಿ ಖರೀದಿ ಮಾಡಿ ತಂದಿರುವ ರಿಸಿಪ್ಟ್ ಎಸಿಬಿ ಕೈಗೆ ಸಿಕ್ಕಿದೆ. ಇಂದು ಅಧಿಕಾರಿಗಳು ಶಾಂತಗೌಡ ಹಾಗೂ ಕುಟುಂಬಸ್ಥರ ಹೆಸರಿನಲ್ಲಿರುವ ಇನ್ನಷ್ಟು ಆಸ್ತಿ ಬೇದಿಸುತ್ತಿದ್ದಾರೆ. ಇಂದು ಬೆಂಗಳೂರಿನ ಬ್ಯಾಂಕ್ ಲಾಕರ್ ಗೆ ಕೂಡಾ ಎಸಿಬಿ ಕೈ ಹಾಕಲಿದೆ. ಬೆಂಗಳೂರಿನ ಬ್ಯಾಂಕ್ ಲಾಕರ್ ಓಪನ್ ಆದರೆ ಚಿನ್ನದ ಗಟ್ಟಿಯ ರಹಸ್ಯ ಬಯಲಿಗೆ ಬರಲಿದೆ.
ನುಂಗಣ್ಣಾ ಶಾಂತಗೌಡ ಧೈವ ಭಕ್ತ:
ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿರೋ ಶಾಂತಗೌಡ ಬಿರಾದರ್ ಕಲಬುರ್ಗಿ ಜಿಲ್ಲೆ ಹಂಗರಗಾ. ಬಿ. ಗ್ರಾಮದಲ್ಲಿರುವ ಪಾರ್ಮ್ ಹೌಸ್ ನಲ್ಲಿಯೂ ಐಶಾರಾಮಿ ಮನೆ ಕಟ್ಟಿದ್ದಾನೆ. ತನ್ನ ಪುತ್ರಿ ನೆನಪಿಗಾಗಿ ಆಶ್ರಮ ಕೂಡಾ ಕಟ್ಟಿದ್ದಾನೆ. ಧೈವ ಭಕ್ತನಾದ ಶಾಂತಗೌಡ ಆಶ್ರಮದ ಎರಡು ಎಕರೆ ಜಾಗವನ್ನು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕೊಟ್ಟಿದ್ದಾನೆ. ಕೋಟಿ ಕೋಟಿ ಜನರ ದುಡ್ಡು ನುಂಗಿ ನೀರು ಕುಡಿದ ಶಾಂತಗೌಡ ಶ್ರೀಶೈಲ್ ಮಲ್ಲಿಕಾರ್ಜುನ ಅಪ್ಪಟ ಭಕ್ತನಾಗಿದ್ದಾರೆ. ಪ್ರತಿವರ್ಷ ಶ್ರೀಶೈಲ್ಗೆ ಪಾದಯಾತ್ರೆ ಕೂಡಾ ಮಾಡುತ್ತಾರೆ.
ಕೋಟಿ ನುಂಗಣ್ಣನಿಗೆ ಜೈಲಿನಲ್ಲಿಯೂ ತಲೆನೋವು:
ಎರಡು ದಿನದಿಂದ ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಶಾಂತಗೌಡ ಬಿರಾದಾರ ಇದ್ದಾನೆ. 14 ದಿನ ನ್ಯಾಯಾಂಗ ಬಂಧನ ಹಿನ್ನಲೆ ಜೈಲು ಪಾಲಾಗಿದ್ದಾನೆ. ಮೊದಲನೇ ದಿನ ಜೈಲು ತಲುಪಿದ ಬಳಿಕ ಶಾಂತಗೌಡ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಜೈಲಿನಲ್ಲಿ ಟನ್ಶ್ಯೆನ್ ಮಾಡಿಕೊಳ್ಳುತ್ತಿರುವ ಶಾಂತಗೌಡಗೆ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜೈಲು ಆಸ್ಪತ್ರೆಯಿಂದ ಹೊರಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸುವಂತೆ ಮನವಿ ಮಾಡಿಕೊಂಡದ್ದಾನೆ. ಶಾಂತಗೌಡ ಆರೋಗ್ಯ ಪರಿಶೀಲಿಸಿದ ಜೈಲಿನ ವೈದ್ಯರ ತಂಡ ಹೊರ ಚಿಕಿತ್ಸೆ ಬೇಡ ಅಂತಾ ಅಭಿಪ್ರಾಯ ಪಟ್ಟಿದ್ದಾರೆ. ಇದು ಶಾಂತಗೌಡಗೆ ಇನ್ನಷ್ಟು ತಲೆನೋವು ಕೊಟ್ಟಿದೆ.
ಒಟ್ಟಾರೆ ಶಾಂತಗೌಡ ಮೇಲೆ ಎಸಿಬಿ ರೇಡ್ ಆದಮೇಲೆ ಇಲ್ಲಿವರೆಗೆ 4 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದು ಸಂಪಾಧನೆಗಿಂತ 400 ಪಟ್ಟು ಹೆಚ್ಚಿನ ಆಸ್ತಿ ಇದೆ. ಆದರೆ ಪತ್ತೆಯಾಗಿರುವ ಆಸ್ತಿ ಅಕ್ರಮ ಸಂಪಾಧನೆ ಅಲ್ಲ ಅಂತ ಕೇಲವರು ಹೇಳುತ್ತಿದ್ದಾರೆ. ಇದು ಅಕ್ರಮ ಹೌದೋ ಅಲ್ವೋ ಅನ್ನೋದು ಎಸಿಬಿ ತನಿಖೆ ನಂತರ ತಿಳಿದುಬರಲಿದೆ



