
ಬೆಂಗಳೂರು : ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಜನರ ತೀರ್ಪಿಗೆ ತಲೆಬಾಗಬೇಕಾಗುತ್ತದೆ. ಚುನಾವಣೆಯಲ್ಲಿ ಕುಮಾರಸ್ವಾಮಿ ಸೋತಿಲ್ವಾ? ಅವರಪ್ಪ ಸೋತಿಲ್ವಾ? ಅವರಣ್ಣ ಸೋತಿದ್ದಾರೆ. ಮಗನೂ ಸೋತಿದ್ದಾರೆ ಎಂದು ಕುಮಾರಸ್ವಾಮಿಗೆ ವಿಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಿಂದ ಜನ ಓಡಿಸಿದ್ದಾರೆ, ಈ ಸಲ ಬಾದಾಮಿಯಿಂದಲೂ ಓಡಬೇಕಾಗುತ್ತದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನ ನೀಡುವ ತೀರ್ಪು ಅಂತಿಮ. ಗುರುಸ್ವಾಮಿ ಎದುರು ನಾನು ಸೋತಾಗ ಇವರು ಎಲ್ಲಿದ್ದರು? ನಾನು ಅಧ್ಯಕ್ಷನಾದಾಗ ಕುಮಾರಸ್ವಾಮಿ ಎಲ್ಲಿದ್ದರು ಅಂತಲೂ ಗೊತ್ತಿಲ್ಲ. ನಾನೇಕೆ ಇವರ ಮುಂದೆ ಹೋಗಿ ಕೈಕಟ್ಟಲಿ. ನಾನೇಕೆ ಅಳಲಿ? ರಾಜ್ಯದ ಜನರ ಮುಂದೆ ಅತ್ತುಕೊಂಡು ತಿರುಗುವವರು ಯಾರು? ಕಣ್ಣೀರು ಹಾಕುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಸಾಮಾನ್ಯರ ಮೇಲೆ ತೆರಿಗೆ ಹಾಕಬೇಡಿ :
ವಿಕೆಂಡ್ ಕರ್ಪ್ಯೂ ನಿನ್ನೆ ವಾಪಸು ಪಡೆದಿದ್ದಾರೆ. ತೆರಿಗೆ ಈಗ ಏರಿಕೆ ಮಾಡುವುದು ಸರಿಯಲ್ಲ. ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹಾಕಿ. ಜನಸಾಮಾನ್ಯರ ಮೇಲೆ ತೆರಿಗೆ ಹಾಕಬೇಡಿ. ಈಗಾಗಲೇ ಕೊರೊನಾದಿಂದ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಸಣ್ಣಪುಟ್ಟ ಆದಾಯ ಇರೋರಿಗೆ ತುಂಬಾ ಕಷ್ಟವಾಗಿದೆ. ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಇಂಧನ ಮಂತ್ರಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯುತ್ ದರ, ಕುಡಿಯುವ ನೀರಿನ ದರ ಏರಿಕೆ ಮಾಡಬಾರದು ಎಂದು ತಿಳಿಸಿದರು.
