
ಬೆಂಗಳೂರು: ಹೊಸಕೋಟೆ ತಾಲೂಕಿನ ಯಲಚೇನಹಳ್ಳಿಯಲ್ಲಿರುವ ವೋಲ್ವೋ ಕಂಪನಿಗೆ ಭೂಮಿ ನೀಡಿರುವ ರೈತ ಕುಟುಂಬಗಳಿಗೆ ಸೂಕ್ತ ಉದ್ಯೋಗ ನೀಡಲು ಒಪ್ಪಿಗೆ ನೀಡಿದೆ.
ವಿಧಾನಸೌಧದಲ್ಲಿಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜು ಮಾತನಾಡಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ವೋಲ್ವೋ ಕಂಪನಿ ಪ್ರತಿನಿಧಿಗಳು ಮತ್ತು ಭೂಮಿ ನೀಡಿರುವ ರೈತ ಪ್ರತಿನಿಧಿಗಳ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, ವೋಲ್ವೋ ಕಂಪನಿಯ ಹಿರಿಯ ಅಧಿಕಾರಿ, ಭೂಮಿ ಕಳೆದುಕೊಂಡ 66 ಕುಟುಂಬಗಳಲ್ಲಿ 33 ಕುಟುಂಬಗಳ 42 ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿದ್ದೇವೆ. ಉಳಿದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯನ್ನು ಕಡಿತಗೊಳಿಸಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದರು.
ಪರಿಷ್ಕರಿಸಿದ ವೇತನ ನೀಡುವ ಪತ್ರಗಳನ್ನು ಐ.ಟಿ.ಐ. ಆದ ಐದು ಮಂದಿ ಅಭ್ಯರ್ಥಿಗಳಿಗೆ ನೀಡಿದ್ದರೂ ಅವರು ಒಪ್ಪದೆ ಡಿಸೆಂಬರ್ 15 ರಿಂದ ಧರಣಿ ನಡೆಸುತ್ತಿದ್ದಾರೆ. ಅವರಿಂದ ಕ್ಷಮಾಪಣೆ ಪತ್ರ ಪಡೆದು ಉದ್ಯೋಗ ನೀಡಲು ಕಂಪನಿ ಸಿದ್ದವಿದೆ ಎಂದು ಕಂಪನಿ ಅಧಿಕಾರಿ ತಿಳಿಸಿದರು.
ಇದಕ್ಕೂ ಮೊದಲು ಮಾತನಾಡಿದ ಸಚಿವ ಎಂ.ಟಿ.ಬಿ. ನಾಗರಾಜು, ಸ್ಥಳೀಯರಿಂದ ಭೂಮಿ ಪಡೆದಿರುವ ಕಂಪನಿ ಸ್ಥಳೀಯರಿಗೆ ಖಾಯಂ ಉದ್ಯೋಗ ನೀಡುವಲ್ಲಿ ಮತ್ತು ಸಿ.ಎಸ್.ಆರ್. ನಿಧಿ ಬಳಕೆ ಮಾಡುವಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ತರಾಟೆಗೆ ತಗೆದುಕೊಂಡರು.
ಅಧಿಕಾರಿಗಳು, ಕಾರ್ಮಿಕ ಕಾಯ್ದೆಯನ್ನು ಬಿಗಿಯಾಗಿ ಜಾರಿಗೊಳಿಸಿ ಕಾರ್ಮಿಕರ ಹಿತ ರಕ್ಷಿಸಬೇಕು. ಅಧಿಕಾರಿಗಳು ಕಾರ್ಮಿಕರ ಬಗ್ಗೆ ಕನಿಕರ ಇಟ್ಟು ಕೆಲಸ ಮಾಡಬೇಕು ಎಂದು ಸಚಿವ ಎಂ.ಟಿ.ಬಿ. ನಾಗರಾಜು ಕಟುವಾಗಿ ಎಚ್ಚರಿಸಿದರು.



