
ಬೆಂಗಳೂರು: ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಐದು ದಿನಗಳ ಕಾಲ ನಡೆದ ಮೇಕೆದಾಟು ಪಾದಯಾತ್ರೆಗೆ ಪರ ವಿರೋಧ ಚರ್ಚೆಗಳು ಕೇಳಿ ಬರ್ತಿದೆ. ಮೇಕೆದಾಟು ಯೋಜನೆಯಿಂದ ಅರಣ್ಯ ನಾಶವಾಗುತ್ತದೆ ಎಂಬ ಮೇದಾ ಪಾಟ್ಕರ್ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದು, ಮೇಕೆದಾಟು ಹೋರಾಟದಿಂದ ನಮ್ಮನ್ನ ಜೈಲಿಗೆ ಕಳುಹಿಸಬಹುದು, ಖುಷಿ ಪಡಬಹುದು. ಪಡೆಯಲಿ ಬಿಡಿ ಎಂದಿದ್ದಾರೆ.
ಆ ಹೆಣ್ಣು ಮಗಳು ಅವರದ್ದೇ ಆದ ಹೋರಾಟ ಮಾಡುತ್ತಿದ್ದಾರೆ. ನಾವು ಜನರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಜನರ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಅವರ ಅಭಿಪ್ರಾಯ ಅವರಿಗೆ. ಮೇದಾ ಪಾಟ್ಕರ್ ಏನಾದ್ರು ಮಾಡಿಕೊಳ್ಳಲಿ. ಸರ್ಕಾರದವರು ಅದಕ್ಕೆ ಉತ್ತರ ಕೊಡಲಿ ಎಂದು ಡಿಕೆಶಿ ಹೇಳಿದ್ದಾರೆ.
ಮೇಕೆದಾಟು ಪಾಜೆಕ್ಟ್ನಿಂದ ನಮ್ಮ ತಾಲೂಕಿಗೆ ಎಷ್ಟು ಲಾಸ್ ಆಗ್ತಿದೆ ಗೊತ್ತಾ. ಇದ್ರಿಂದ ನಮ್ಮ ಜಮೀನು ಕಳೆದುಕೊಳ್ತೀವಿ. ಆದ್ರೂ ದಮ್ ಕಟ್ಟಿಕೊಂಡು ಸುಮ್ಮನಿದ್ದೇವೆ. ನನ್ನ ಕ್ಷೇತ್ರದ ಜನರಿಗೆ ಆ ಮೇಲೆ ಹಣ ಕೊಡಿಸೋ ಪ್ರಯತ್ನ ಮಾಡ್ತೇನೆ ಎಂದಿದ್ದಾರೆ.
ಮೇಕೆದಾಟು ಮಾಡಲಿ, ಬಿಡಲಿ. ನನ್ನ ವಿರುದ್ಧ ಏನೆಲ್ಲ ಪ್ರಯತ್ನ ನಡೆಯಬೇಕೊ ಅದು ನಡೆಯುತ್ತದೆ. ಒಂದು ದಿನ ನನ್ನ ಮೇಲೆ ಕೇಸ್ ಹಾಕಬಹುದಿತ್ತು. ಅದು ಬಿಟ್ಟು ದಿನಾ ಕೇಸ್ ಹಾಕುವ ಪ್ರಮೇಯ ಏನಿತ್ತು. ನಮ್ಮ ಮೇಲೆ ಅಷ್ಟೇ ಯಾಕೆ ಕೇಸ್. ಬಿಜೆಪಿ ಅವರ ಮೇಲೆ ಕೇಸ್ ಹಾಕಿಲ್ಲ. ಹೆಚ್ಚು ಅಂದ್ರೆ ನನ್ನನ್ನ ಜೈಲಿಗೆ ಹಾಕಬಹುದು. ಅದ್ರಿಂದ ಅವರು ಖುಷಿ ಪಡಬಹುದು. ಪಡೆಯಲಿ ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈಗಿರುವ ಕೊರೊನಾ ಮಾರ್ಗಸೂಚಿ ಸಡಿಲಗೊಂಡ ಬಳಿಕ ಮತ್ತೆ ಐದು ದಿನಗಳ ಪಾದಯಾತ್ರೆ ಮಾಡುವ ಸಂಕಲ್ಪ ಮಾಡಲಾಗಿದೆ. ನನ್ನನ್ನ ಟಾರ್ಗೆಟ್ ಮಾಡಿದ್ರೂ ಹೋರಾಟಕ್ಕೆ ಸಿದ್ದ. ನಾವು ಕೋರ್ಟ್ಗೂ ಹಾಕ್ತಿವಿ. ಸರ್ಕಾರಕ್ಕೂ ಕಾಗದ ಬರಿತೇವೆ. ನಮಗೂ ಕಾಲ ಬರುತ್ತೆ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದು ಬಿಜೆಪಿ ಸರ್ಕಾರದ ಕ್ರಮಕ್ಕೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಡಿಕೆಶಿ ಸೂಚನೆ ಮೇರೆಗೆ ಸ್ವಚ್ಛತಾ ಕಾರ್ಯ :
ಮೇಕೆದಾಟು ಪಾದಯಾತ್ರೆ ಆರಂಭಗೊಂಡ ಸಂಗಮದಿಂದ ಪಾದಯಾತ್ರೆ ನಡೆದ ದಾರಿಯುದ್ದಕ್ಕೂ ಸ್ವಚ್ಛತ ಕಾರ್ಯ ಭರದಿಂದ ನಡೆಯುತ್ತಿದೆ. ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸೂಚನೆ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ವಯಃ ಸೇವಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪಾದಯಾತ್ರೆ ನಡೆದ ಮಾರ್ಗದುದ್ದಕ್ಕೂ ಪ್ರತ್ಯೇಕ ತಂಡಗಳನ್ನ ರಚಿಸಿ ಸ್ವಚ್ಛತ ಕಾರ್ಯ ಮಾಡಲಾಗುತ್ತಿದೆ.



