ರಾಜಧಾನಿಗೂ ಕಾಲಿಟ್ಟ ಹಿಜಾಬ್ ವಿವಾದ : ಚಂದ್ರಾ ಲೇಔಟ್ ಶಾಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ

ಬೆಂಗಳೂರು : ಹಿಜಾಬ್ ವಿವಾದ ಈಗ ರಾಜ್ಯ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಹೈಕೋರ್ಟ್ ಮಧ್ಯಂತರ ಆದೇಶದ ಮಧ್ಯೆಯೂ ಚಂದ್ರಾಲೇಔಟ್ ನ ಖಾಸಗಿ ಶಾಲೆಗೆ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ಧರಿಸಿ ಬಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಹಿಜಾಬ್ ಧರಿಸಿ ಬಂದ ಮಕ್ಕಳಿಗೆ ಹಿಜಾಬ್ ತೆಗೆಯುವಂತೆ ಶಿಕ್ಷಕರಿಂದ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಚಂದ್ರಾಲೇಔಟ್ ವಿದ್ಯಾ ಸಾಗರ್ ಶಾಲೆಯ 7ನೇ ತರಗತಿ ಮಕ್ಕಳಿಗೆ ಶಿಕ್ಷಕರಿಂದ ಹಿಜಾಬ್ ವಿಚಾರವಾಗಿ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ವಿಷಯ ತಿಳಿದ ಪೋಷಕರು ಶಾಲೆಗೆ ಬಂದು ಶಿಕ್ಷಕರ ಜೊತೆ ವಾಗ್ವಾದ ನಡೆಸುತ್ತಿದ್ದಾರೆ. ತರಗತಿ ಬೋರ್ಡ್ ನಲ್ಲಿ ಹಿಜಾಬ್ ಧರಿಸಿದವರ ಬಗ್ಗೆ ಅವಾಚ್ಯವಾಗಿ ಬರೆಯಲಾಗಿದೆ ಎಂದು ಪೋಷಕರು ಶಿಕ್ಷಕರನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದು, ಸ್ಥಳಕ್ಕೆ ಪೋಲಿಸರ ಆಗಮಿಸಿದ್ದಾರೆ. ಶಾಲೆಯ ಗೇಟ್ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಸೇರುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಶಾಲಾ ಆವರಣಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ರಾಜೇಂದ್ರ ಸ್ಥಳಕ್ಕೆ ಆಗಮಿಸಿದ್ದಾರೆ. ಶಾಲೆಯ ಮೈನ್ ಗೇಟ್ ಬಂದ್ ಮಾಡಿಸಿದ ಪೊಲೀಸರು ಪೋಷಕರನ್ನು ಚದುರಿಸಿ ಮನೆಗೆ ಕಳುಹಿಸುತ್ತಿದ್ದಾರೆ.
