
ಚೆಂಬೆಳಕು ಖ್ಯಾತಿಯ ಕವಿ ನಾಡೋಜ ಚೆನ್ನವೀರ ಕಣವಿಯವರು ಇಂದು ಮುಂಜಾನೆ ಅಸ್ತಂಗತವಾಗಿದ್ದು, ಅವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ಕರ್ನಾಟಕ ಕಾಲೇಜು ಆವರಣದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಚೆನ್ನವೀರ ಕಣವಿಯವರ ಪುತ್ರ ಶಿವಾನಂದ ಕಣವಿಯವರು ಮಾಹಿತಿ ನೀಡಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ತಂದೆ ಚೆನ್ನವೀರ ಕಣವಿಯವರು ನಿಮೋನಿಯಾದಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಚಿಕಿತ್ಸೆಗಾಗಿ ಎಸ್ಡಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಅಂದಿನಿಂದ ಇಂದಿನವರೆಗೂ ತಂದೆಯವರ ಆರೋಗ್ಯ ಸುಧಾರಣೆಗಾಗಿ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ಶಕ್ತಿ ಮೀರಿ ಪ್ರಯತ್ನ ಮಾಡಿದ್ದಾರೆ. ಆದರೆ ಈಗ ಅವರು ನಮ್ಮೊಂದಿಗೆ ಇಲ್ಲ, ತಂದೆಯವರನ್ನು ಕಳೆದುಕೊಂಡ ಸಾಹಿತ್ಯ ಲೋಕ ಬಡವವಾಗಿದೆ ಎಂದರು.
ತಂದೆಯವರು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು, ಈಗ ಅವರು ನಮ್ಮನ್ನು ಅಗಲಿದ್ದಾರೆ. ಇಂದು ಸಂಜೆ 5 ಗಂಟೆಯ ನಂತರ ಮುಗದ ಗ್ರಾಮದ ಬಳಿಯ ಸೃಷ್ಠಿ ಫಾರ್ಮ್ ಹೌಸ್ನ ಜಮೀನಿನಲ್ಲಿ ಅಂತಿಮ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾಣ ಮಾಡಲಾಗಿದೆ. ತಾಯಿಯವರ ಶಾಂತಾದೇವಿ ಅವರ ಅಂತ್ಯಕ್ರಿಯೆ ಕೂಡಾ ಅಲ್ಲಿಯೇ ಮಾಡಲಾಗಿದ್ದು, ಹಾಗಾಗಿ ತಂದೆಯವರ ಅಂತ್ಯಕ್ರಿಯೆ ಕೂಡಾ ಅಲ್ಲಿಯೇ ನೇರವೇರಿಸಲಾಗುವುದು ಎಂದು ತಿಳಿಸಿದರು.



