ಮಂಡಿ ನೋವಿದೆ ಎಂದು ಸಿಎಂ ಬದಲಾಯಿಸುವುದಿಲ್ಲ: ಸಂಸದ ಪ್ರತಾಪ್ ಸಿಂಹ

ಮೈಸೂರು: ವಾಜಪೇಯಿ ಅವರಿಗೆ ಎರಡನೇ ಕ್ಯಾಪ್ ಗಳನ್ನ ಚೇಂಜ್ ಮಾಡಲಾಗಿತ್ತು. ಆಗ ಅವರಿಗೆ ಮಂಡಿನೋವಿದೆ ಅಂತಾ ಹೇಳಿ ಪ್ರಧಾನಿ ಬದಲಾವಣೆ ಮಾಡಲಿಲ್ಲ. ಹಾಗೆಯೇ ರಾಜ್ಯದಲ್ಲೂ ಸಿಎಂಗೆ ಮಂಡಿ ನೋವಿದೆ ಎಂದು ಸಿಎಂ ಬದಲಾಯಿಸಲು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಸಿಎಂಗೆ ಮಂಡಿ ನೋವಿಗೆ ಚಿಕಿತ್ಸೆ ಕೊಡಿಸುತ್ತೇವೆ, ಆದರೆ ಸಿಎಂ ಬದಲಾಯಿಸುವುದಿಲ್ಲ. ವಿಧಾನಸೌಧ ಕಟ್ಟಡದಲ್ಲಿ ವಾಸ್ತು ದೋಷವಿದೆ. ಸಿಎಂ ಬಿಟ್ಟು ಉಳಿದ 223 ಜನರಿಗೂ ಸಿಎಂ ಆಗಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಇಂತಹ ಮಾತುಗಳು ಕೇಳಿ ಬರುತ್ತವೆ ಎಂದರು. ಸಿಎಂ ಬದಲಾಯಿಸುತ್ತೇವೆ ಅನ್ನೋದು ಉಹಾಪೊಹ ಅಷ್ಟೇ ಎಂದರು.
ರಂಗಾಯಣ ನಿರ್ದೇಶಕರನ್ನು ವಜಾ ಮಾಡುವಂತೆ ಪ್ರತಿಭಟನೆಗಳು ನಡೆಯುತ್ತಿರುವುದು ಸರಿಯಲ್ಲ. ರಂಗಾಯಣದಲ್ಲಿ ಬಹುಕಾಲದಿಂದಲೂ ಎಡಪರರ ಹಾವಳಿಯಿತ್ತು. ಇದು ಎಡಪಂಥೀಯರ ಸ್ವತ್ತು ಎನ್ನುವ ರೀತಿಯಾಗಿದೆ. ರಂಗಾಯಣದ ಬಗ್ಗೆ ಅಪಪ್ರಚಾರ ಮಾಡಬೇಡಿ, ನಿಮಗೆ ಅವಕಾಶ ಸಿಗುತ್ತಿಲ್ಲ ಎಂದರೆ ಅವಕಾಶ ಕೊಡಿಸುತ್ತೇವೆ ಎಂದು ತಿಳಿಸಿದರು.
ರಂಗಾಯಣ ನಿರ್ದೇಶಕರ ವಿರುದ್ಧದ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರ ಬೆಂಬಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು, ಟೆರರಿಸ್ಟ್ಗಳಿಗೆ ಬೆಂಬಲ ಕೊಟ್ಟವರು ಇವರಿಗೆ ಬೆಂಬಲ ಕೊಡದೆ ಇರುತ್ತಾರೆಯೇ? ಎಲ್ಲಾ ದೇಶದ್ರೋಹ ಚಟುವಟಿಕೆಗಳ ಹಿಂದೆ ಕಾಂಗ್ರೆಸ್ ಇರುತ್ತದೆ. ಈಗಿನ ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದರು.
ಕಾಂಗ್ರೆಸ್ ಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿಯ ಸರ್ಕಾರ ಎಂಬುದು ಜನರಿಗೆ ಗೊತ್ತಿದೆ ಎಂದರು. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುವುದಿಲ್ಲ. 2023ರಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.
