ಅನೇಕ ದಿನಗಳಿಂದ ನಿಂತಲ್ಲಿಯೇ ನಿಂತಿರುವ ಲಾರಿಗಳು; ಚಾಲಕ, ಮಾಲಕರಿಂದ ಪ್ರತಿಭಟನೆ

ಕಾರವಾರ : ಅಂಕೋಲಾ – ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ನಲ್ಲಿ ಹೆದ್ದಾರಿ ಕುಸಿತದಿಂದಾಗಿ ಭಾರಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.ಪರಿಣಾಮ ಮಲೆನಾಡು ಮತ್ತು ಬಯಲುಸೀಮೆ ಸಂಪರ್ಕ ಕಡಿತಗೊಂಡು ಸರಕು ಸಾಗಾಣಿಕೆಯ ವಾಹನಗಳು ಸಾಲುಗಟ್ಟಿ ನಿಂತಿವೆ.ಆ ವಾಹನಗಳು ಚಲಿಸಲಾಗದೆ ವಾಹನ ಚಾಲಕ ಮಾಲಕರು ಕಂಗಾಲಾಗಿದ್ದು,ಕಳೆದ ಹದಿನಾಲ್ಕು ದಿನಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಆದರೆ ಇವರಿಗೆ ಪರ್ಯಾಯ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಚಾಲಕರು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.ಅಂಕೋಲಾದ ಬಾಳೆಗುಳಿ ಕ್ರಾಸ್ ನಲ್ಲಿ ಇಂದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅರೆಬೈಲ್ ಘಟ್ಟದಲ್ಲಿ ಗುಡ್ಡ ಕುಸಿತವಾಗಿ ದೊಡ್ಡ ವಾಹನಗಳ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು,ಕೇರಳಗಳಿಂದ ಸರಕನ್ನು ತುಂಬಿಕೊoಡು ಮಹಾರಾಷ್ಟ್ರ, ಆಂದ್ರಪ್ರದೇಶ,ಗುಜರಾತ್ ಮತ್ತು ಹುಬ್ಬಳ್ಳಿ,ಬೆಳಗಾವಿ ಭಾಗಗಳಿಗೆ ಸಾಗುವ ಲಾರಿಗಳು ಕಳೆದ ಹದಿನಾಲ್ಕು ದಿನಗಳಿಂದ ಹೆದ್ದಾರಿಯ ಎರಡು ಬದಿಯಲ್ಲಿ ಲಂಗರು ಹಾಕಿವೆ.
ಲಾರಿಗಳನ್ನು ಬಿಟ್ಟು ನಾವು ತೆರಳುವಂತಿಲ್ಲ.ಅದೇ ರೀತಿ ನಮ್ಮ ಗುರಿಯನ್ನು ತಲುಪಲು ಆಗುತ್ತಿಲ್ಲ.ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆಯೊಂದೇ ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಈ ಹೆದ್ದಾರಿ ತಕ್ಷಣ ಆರಂಭವಾಗದಿದ್ದರೆ ವಾಣಿಜ್ಯೋದ್ಯಮದ ಮೇಲೆ ಭಾರಿ ಪರಿಣಾಮ ಬೀರಲಿದೆ.ಮಂಗಳೂರು ಬಂದರಿನಿoದ ಅನಿಲ ತುಂಬಿದ ಟ್ಯಾಂಕರಗಳು ಈ ಹೆದ್ದಾರಿ ಮೂಲಕವೇ ಸಾಗಬೇಕು.ಇದು ಬಿಟ್ಟರೆ ಬೇರಾವ ದಾರಿ ಇಲ್ಲ.ಇಂತಹ ಅನಿಲ ತುಂಬಿದ ನೂರಾರು ಟ್ಯಾಂಕರ್ ಇಲ್ಲಿ ಸಿಲುಕಿಕೊಂಡಿದೆ.ಇತರ ವಸ್ತುಗಳನ್ನು ತುಂಬಿಕೊಂಡ ಲಾರಿಗಳು ಸಿಲುಕಿಕೊಡಿದೆ.ಈಗಾಗಲೇ ಲಘು ವಾಹನಗಳ ಸಂಚಾರ ಆರಂಭಗೊoಡಿದೆ.ಆದರೆ ಭಾರೀ ಗಾತ್ರದ ವಾಹನ ಸಂಚಾರ ಇನ್ನೂ ಆರಂಭವಾಗಿಲ್ಲ.ಇಲ್ಲಿ ನಿಲ್ಲಿಸಿಟ್ಟ ಲಾರಿಯ ಚಾಲಕ ಮತ್ತು ಕ್ಲೀನರಗಳು ಲಾರಿಯಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದರೆ,ಇನ್ನೂ ಕೆಲವರಿಗೆ ಕೆಲ ಸಂಘ ಸಂಸ್ಥೆಗಳು ಊಟ ಪೂರೈಸುತ್ತಿದ್ದಾರೆ.
ವಾರದಿಂದ ಲಾರಿ ನಿಲ್ಲಿಸಿಕೊಂಡು ಹೆದ್ದಾರಿ ಮೇಲೆ ವಾಸ್ತವ್ಯ ಮಾಡಿರುವುದರಿಂದ ಒಂದೆರಡು ದಿನಕ್ಕೆ ಆಗುವಷ್ಟು ತಂದಿರುವ ಅಕ್ಕಿ ಬೇಳೆ ಮತ್ತು ಕೈಯಲ್ಲಿರುವ ಹಣವು ಖಾಲಿ ಆಗಿದೆ.ನಾವು ಉಪವಾಸ ಉಳಿಯುವ ಸ್ಥಿತಿ ಬಂದೊದಗಿದೆ ಎಂದು ಲಾರಿ ಚಾಲಕರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.




