ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆಗೆ ಕಾರ್ಮಿಕ ಪರಿಷತ್ ಖಂಡನೆ

ಉಡುಪಿ: ನಟ ದರ್ಶನ್ ತೂಗುದೀಪ ಮೈಸೂರಿನ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಮಾಡಿದ ಆರೋಪದ ವಿಷಯಕ್ಕೆ ಸಂಬಂಧಪಟ್ಟಂತೆ ತಕ್ಷಣ ದೂರು ದಾಖಲಿಸಿ ತನಿಖೆ ನಡೆಸಬೇಕು, ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಸರ್ಕಾರಕ್ಕೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಡಾ ರವಿ ಶೆಟ್ಟಿ ಬೈಂದೂರು ಒತ್ತಾಯಿಸಿದ್ದಾರೆ.
ಸರ್ಕಾರವು ಸ್ವತಃ ಇಂದ್ರಜಿತ್ ಲಂಕೇಶ್ ದೂರಿನನ್ವಯ ಮತ್ತು ಹೇಳಿಕೆಯ ಆಧಾರದಡಿ ದೂರು ದಾಖಲಿಸಿಕೊಂಡು ತನಿಖೆಗೆ ಒಳಪಡಿಸಬೇಕು. ಈ ದೂರಿಗೆ ಸಂಬಂಧಪಟ್ಟಂತೆ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡ ಇರುವುದರಿಂದ ವಿಷಯ ಇಲ್ಲಿಗೇ ಮುಚ್ಚಿಹೋಗುವ ಸಾಧ್ಯತೆ ಇದ್ದು, ಅದಕ್ಕೆ ಸರ್ಕಾರ ತಕ್ಷಣ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿ ದೂರು ದಾಖಲಿಸಿ ಕಾರ್ಮಿಕನಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಹೋಟೆಲ್ ವಿಭಾಗದ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಮಾತನಾಡಿ ರೀಲ್ ಜೀವನದಲ್ಲಿ ಹೀರೋ ಅದ ದರ್ಶನ್ ಅವರು ನಿಜಜೀವನದಲ್ಲಿ ವಿಲನ್ ರೀತಿ ನಡೆದುಕೊಂಡಿರುವುದು ಬಹಳ ಬೇಸರ ತಂದಿದೆ. ಬಹಳ ಕಷ್ಟಪಟ್ಟು ಮೇಲೆ ಬಂದಿರುವ ಅವರು ಬಡ ಕಾರ್ಮಿಕರ ಸ್ಥಿತಿ ಅರ್ಥಮಾಡಿಕೊಳ್ಳಬೇಕಿತ್ತು. ಇದರ ಸತ್ಯಾಸತ್ಯತೆ ತಿಳಿಯುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟು, ಬಡ ಕಾರ್ಮಿಕರಿಗೆ ಸೂಕ್ತ ನ್ಯಾಯ ದೊರಕದಿದ್ದಲ್ಲಿ ದರ್ಶನ್ ಮನೆ ಮುಂದೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಹೋಟೆಲ್ ವಿಭಾಗದ ವತಿಯಿಂದ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.




