ಮೇಕೆದಾಟು ಯೋಜನೆ ಶೀಘ್ರ ಆರಂಭಕ್ಕೆ ಮನವಿ

ರಾಮನಗರ: ಆರು ಜಿಲ್ಲೆಯ ರೈತರ ಪಾಲಿಗೆ ವರದಾನ ವಾಗಲಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಶೀಘ್ರವೇ ಆರಂಭಿಸುವಂತೆ ರಾಜ್ಯಸರ್ಕಾರಕ್ಕೆ ಮರಳೇಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಮಹಾಸ್ವಾಮಿಗಳು ಮನವಿ ಮಾಡಿದರು.
ಶ್ರೀ ಮಠದಲ್ಲಿ ಮೇಕೆದಾಟು ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಯೋಜನೆಯ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಒಂದು ಹೆಮ್ಮೆಯ ವಿಷಯವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮೇಕೆದಾಟು ಯೋಜನೆ ಕಾರ್ಯಗತಕ್ಕೆ ಶಾಸಕ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅರವರ ಮುಂದಾಳತ್ವದಲ್ಲಿ ೬ ಜಿಲ್ಲೆಯಲ್ಲಿನ ಮಠಾಧೀಶರು, ರೈತ ಮುಖಂಡರು, ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಒಗ್ಗೂಡಿ ಯೋಜನೆಯ ಸಾಧಕ-ಬಾಧಕಗಳನ್ನು ಮನವರಿಕೆ ಮಾಡಿಕೊಡುವಂತೆ ಸಲಹೆ ನೀಡಿದರು.
ಮೇಕೆದಾಟು ಅಣೆಕಟ್ಟು ಹೋರಾಟ ಸಮಿತಿ ಅಧ್ಯಕ್ಷ. ಸಂಪತ್ಕುಮಾರ್ ಮಾತನಾಡಿ, ಈ ಯೋಜನೆ ಅನುಷ್ಠಾನ ಮಾಡುವುದರಿಂದ ರಾಮನಗರ ಜಿಲ್ಲೆ ಅಷ್ಟೇ ಅಲ್ಲದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾ. ಜಿಲ್ಲೆಯ ರೈತರ ಕೃಷಿಗೆ ಮಾತ್ರವಲ್ಲದೆ ಬೆಂಗಳೂರು ನಗರದ ಜನರ ಕುಡಿಯುವ ನೀರು ಸರಬರಾಜಿಗೂ ಅನುಕೂಲವಾಗಲಿದೆ ಎಂದರು.
ಮೇಕೆದಾಟಿನಲ್ಲಿ ಶೀಘ್ರವಾಗಿ ಅಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವಂತೆ ರಾಜ್ಯ ಸರ್ಕಾರದ ಮೇಲೆಒತ್ತಡ ಹೇರುವ ಸಲುವಾಗಿ, ಜಿಲ್ಲೆಯ ಹರಗುರು ಚರಮೂರ್ತಿ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸುವ ಬಗ್ಗೆ ಶಾಸಕ ಡಿ.ಕೆ.ಶಿವಕುಮಾರ್, ಸಂಸದಡಿ.ಕೆ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹೋರಾಟದ ರೂಪುರೇಷ ಸಿದ್ದಪಡಿಸುವುದಾಗಿ ತಿಳಿಸಿದರು.
ಜಿಲ್ಲಾ ರೈತ ಮುಖಂಡ ಎಂ.ಡಿ. ಶಿವಕುಮಾರ್,ಹೋರಾಟ ಸಮಿತಿಯ ಖಜಾಂಚಿ ಮಧುಸೂದನ್, ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ವಚನಕಾರ ಎಲ್ಲೇಗೌಡ ಬೆಸಗರಹಳ್ಳಿ ಸೇರಿದಂತೆ ರೈತ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.




