ಚಿಕ್ಕಮಗಳೂರು
ರಸ್ತೆ ಅಗಲೀಕರಣ; ಹಾನಿಯಾಗುವ ಆಸ್ತಿಗೆ ಪರಿಹಾರ

ಚಿಕ್ಕಮಗಳೂರು: ನಗರದ ಎಐಟಿ ವೃತ್ತದಿಂದ ಕಲ್ಯಾಣ ನಗರದ ಮೂಲಕ ಹಿರೇಮಗಳೂರುವರೆಗೆ ಬೈಪಾಸ್ ರಸ್ತೆಯ ಅಗಲೀಕರಣ ಕಾಮಗಾರಿ ವೇಳೆ ಹಾನಿಯಾಗುವ ಜಮೀನು ಮತ್ತು ಮನೆಗಳಿಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ. ರಸ್ತೆಯ ಮಾರ್ಜಿನ್ ಉಲ್ಲಂಘನೆ, ಕಟ್ಟಡ ಪರವಾನಗಿ ಹಾಗೂ ಕಾನೂನಿನ ಉಲ್ಲಂಘನೆಯಾಗಿದ್ದಲ್ಲಿ ಸರ್ಕಾರ ಮತ್ತು ಕಾನೂನಿನ ಪ್ರಕಾರ ಯಾವುದೇ ರೀತಿಯ ಪರಿಹಾರ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಮೀನು, ಮನೆ ಕಳೆದುಕೊಳ್ಳುವವರು ದಾಖಲೆ ಮತ್ತು ತಮ್ಮ ಬೇಡಿಕೆಯನ್ನು ಲಿಖಿತ ರೂಪದಲ್ಲಿ ನೀಡಬೇಕು. ದಾಖಲೆ ಪರಿಶೀಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ರಸ್ತೆ ಬದಿಯಲ್ಲಿ ಹಾನಿಗೀಡಾಗಲಿರುವ ಒಟ್ಟು 59 ಮನೆಗಳಲ್ಲಿ ಕೆಲವು ಸಂಪೂರ್ಣ ಹಾನಿ, ಇನ್ನು ಕೆಲವು ಭಾಗಶಃ, ಉಳಿದಂತೆ ಮನೆಗಳ ಸ್ಪೇರ್ಕೇಸ್, ಕಾಂಪೌಂಡ್ಗಳು ಹಾನಿಗೀಡಾಗಲಿದ್ದು, ಅವುಗಳಿಗೆ ತಕ್ಕಂತೆ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್ ಮತ್ತಿತರ ಅಧಿಕಾರಿಗಳು ಇದ್ದರು.




