ಜಿಲ್ಲಾ ಸುದ್ದಿದಾವಣಗೆರೆ

ಬೆಣ್ಣೆನಗರಿಯಲ್ಲಿ ಮಳೆ ಆರ್ಭಟ: ಜನಜೀವನ ತತ್ತರ…!

ದಾವಣಗೆರೆ: ಭಾರೀ‌ ಮಳೆ ಸುರಿದ ಪರಿಣಾಮ ಜನರು ಸಂಕಷ್ಟ ಅನುಭವಿಸಿದ್ದಾರೆ. ರಾತ್ರಿಯೆಲ್ಲಾ ಮನೆಯೊಳಗೆ ನುಗ್ಗಿದ್ದ ನೀರು ಹೊರ ಹಾಕಲು ಹರಸಾಹಸಪಟ್ಟ ಘಟನೆ ನಡೆದಿದೆ. ಭಾನುವಾರ ರಾತ್ರಿ ಸುಮಾರು ನಾಲ್ಕು ಗಂಟೆಗಳ ಕಾಲ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.

ದಾವಣಗೆರೆ ನಗರದ ಅಣ್ಣಾನಗರ, ಭಾರತ್ ಕಾಲೋನಿ, ಎಸ್. ಎಂ. ಕೃಷ್ಣ ನಗರದಲ್ಲಿನ ಮನೆಯೊಳಗೆ ನೀರು ನುಗ್ಗಿದ್ದು, ಜನರು ಪರದಾಡಿದ್ರು. ಮನೆಯಲ್ಲಿ ಅಕ್ಕಿ, ಬೇಳೆ, ಕಾಳು ಸೇರಿದಂತೆ ಎಲ್ಲವೂ ನೀರಿನಿಂದ ಆವೃತವಾಗಿತ್ತು. ನೀರು ನುಗ್ಗಿದರಿಂದಾಗಿ ರಾತ್ರಿ ಮನೆಯಿಂದ ನೀರು ಹೊರಹಾಕುವಲ್ಲಿ ಸಾಕು ಸಾಕಾಗಿ ಹೋದರು.

ಧಾರಾಕಾರವಾಗಿ ಮಳೆ ಸುರಿದರೆ ಕೆಲವು ಏರಿಯಾಗಳಲ್ಲೀ ನೀರು ನುಗ್ಗುವುದು ಸಾಮಾನ್ಯವಾಗಿದೆ. ರಾಜಕಾಲುವೆ ಹಾದು ಹೋಗಿರುವ ಕಡೆಗಳಲ್ಲಿ ಈ ಸಮಸ್ಯೆ ಬರುತ್ತಲೇ ಇದೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿದು ಹೋಗದೇ ನಿಲ್ಲುವ ಕಾರಣದಿಂದ ಕೆಲ ಪ್ರದೇಶಗಳ ಜನರು ಮಳೆ ಬಂದರೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ
ದಯನೀಯ ಸ್ಥಿತಿ ಇದೆ.

ಗುಡುಗು, ಮಿಂಚು ಸಹಿತ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆ ನಿಂತು ಹೋದ ಮೇಲೆ ಎಂಬಂತೆ ಮನೆಯಲ್ಲಿದ್ದ ತರಕಾರಿ, ದವಸಧಾನ್ಯಗಳು, ಅಕ್ಕಿ ಉಪಯೋಗಕ್ಕೆ
ಬಾರದ ಸ್ಥಿತಿಯಲ್ಲಿದ್ದು, ಜಿಲ್ಲಾಡಳಿತ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.

ದಾವಣಗೆರೆ ತಾಲೂಕಿನ ಮಾಯಕೊಂಡ ಕ್ಷೇತ್ರದ ಆನಗೋಡು ಹೋಬಳಿಯ ತೋಳಹುಣಸೆಯ ಹಳೇ ಊರಿನಲ್ಲಿ ಮಳೆ ಬಂದು ಎಲ್ಲಾ ಮನೆಗಳಿಗೆ ನೀರು ನುಗ್ಗಿದೆ. ಜಾನುವಾರುಗಳು ಸಂಕಷ್ಟ
ಅನುಭವಿಸುವಂತಾಗಿದೆ. ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ರಾತ್ರಿಯೆಲ್ಲಾ ಜಾಗರಣೆ ಮಾಡುವಂತಾಯ್ತು. ಅಕ್ಕಿ, ರಾಗಿ, ಜೋಳ ಸೇರಿದಂತೆ ಬೆಳೆಗಳು ನೀರುಪಾಲಾಗಿವೆ. ಇನ್ನು ತೋಳಹುಣಸೆ ಗ್ರಾಮದಲ್ಲಿ ಹರಿಯುವ ಹಳ್ಳವನ್ನು ದುರಸ್ತಿ ಪಡಿಸಬೇಕು. ಒಳಚರಂಡಿ ಕಾಮಗಾರಿ ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸ್ಥಳ ಪರಿಶೀಲನೆ ಮಾಡಿ ಅನಾಹುತಕ್ಕೆ ಪರಿಹಾರ ನೀಡಬೇಕು. ಸಣ್ಣ ಸಣ್ಣ ಅಂಗಡಿಗಳಿಗೆ ನೀರು ನುಗ್ಗಿದ್ದು, ನಷ್ಟ ಸಂಭವಿಸಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button