ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಕಾರವಾರದ ವ್ಯಕ್ತಿ ಮರಳಿ ತಾಯ್ನಾಡಿಗೆ

ಕಾರವಾರ : ಆಫ್ಘಾನ್ ಅರಾಜಕತೆಯಿಂದಾಗಿ ಕಳೆದೆರಡು ವಾರಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಾರವಾರ ಮೂಲದ ವ್ಯಕ್ತಿಯೋರ್ವ ಕೊನೆಗೂ ತವರು ಸೇರಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಾರವಾರ ತಾಲೂಕಿನ ಸದಾಶಿವಗಡ ತಾರಿವಾಡಾದ ರಾಜೇಶ್ ಪಡುವಾಳಕರ್ ಅಫ್ಘಾನಿಸ್ತಾನದಿಂದ ಮರಳಿದ ಕನ್ನಡಿಗ.ಕಳೆದ 6 ತಿಂಗಳ ಹಿಂದೆ ಕಾಬೂಲ್ಗೆ ತೆರಳಿ ಎಕ್ಲಬ್ ಎಂಬ ಅಮೆರಿಕ ಮೂಲದ ಕಂಪನಿಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ ತಾಲಿಬಾನಿಗಳ ಅಟ್ಟಹಾಸದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು.
ಅದರಲ್ಲಿಯೂ ಕಾಬೂಲ್ ವಶಪಡಿಸಿಕೊಂಡ ತಾಲಿಬಾನಿಗಳು ಎಲ್ಲೆಡೆ ದಾಳಿ ನಡೆಸುತ್ತಿದ್ದಾಗ ಆಗಸ್ಟ್,17 ರಂದು ಅಮೆರಿಕ ಸೇನೆ ಸಹಕಾರದಲ್ಲಿ ಕಾಬೂಲ್ನಿಂದ ಖತಾರ್ಗೆ ಸ್ಥಳಾಂತರಿಸಲಾಗಿತ್ತು. ಬಳಿಕ ಭಾರತೀಯ ವಾಯು ಸೇನಾ ವಿಮಾನದ ಮೂಲಕ ದೆಹಲಿಗೆ ಸೋಮವಾರ ಆಗಮಿಸಿ ಇಂದು ಮುಂಬೈ – ಗೋವಾ ಮಾರ್ಗವಾಗಿ ಕಾರವಾರ ತಲುಪಿದ್ದಾರೆ. ತನ್ನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ರಾಜೇಶ್ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.




