ಸುಳ್ಳು ಹೇಳಿ ಮೂವರನ್ನು ಮದುವೆಯಾಗಿ ವಂಚಿಸಿ, ನಾಲ್ಕನೇ ಮದುವೆಗೆ ತಯಾರಿ ನಡೆಸಿದ ಭೂಪ

ಚಿಕ್ಕಮಗಳೂರು: ಒಂದಾದ ನಂತರ ಇನ್ನೊಂದರಂತೆ ಮೂವರನ್ನು ಮದುವೆಯಾಗಿ, ಆ ಮೂರು ಪತ್ನಿಯರಿಗೆ ವಂಚನೆ ಮಾಡಿದ್ದಲ್ಲದೆ, ನಾಲ್ಕನೇ ಮದುವೆಯಾಗಲು ಹೊರಟಿರುವ ನಯವಂಚಕ ವ್ಯಕ್ತಿಯ ವಿರುದ್ಧ ಮದುವೆಯಾಗಿದ್ದ ಪತ್ನಿಯರೆಲ್ಲ ಸೇರಿ ಈಗ ತಮಗೆ ನ್ಯಾಯ ಕೊಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ.
ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ನಿವಾಸಿ ಯೂಸುಫ್ ಹೈದರ್ ಈ ಪ್ರಕರಣದ ಆರೋಪಿ. ಈತ ನಾಲ್ಕನೆಯ ಯುವತಿಯನ್ನು ಮದುವೆಯಾಗಲು ತಮಗೆ ತಿಳಿಯದಂತೆ ಕರೆದುಕೊಂಡು ಹೋಗಿದ್ದಾನೆಂದು ಕಳಸ ಠಾಣೆಯಲ್ಲಿ ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆ ರಜಾಕ್ ದೂರು ಸಲ್ಲಿಸಿದ್ದಾರೆ.
ಯೂಸುಫ್ ತಾನು ಮಂತ್ರವಾದಿ ಎಂದು ಜನರನ್ನು ನಂಬಿಸಿ, ಅಮಾಯಕರಿಗೆ ವಂಚಿಸುತ್ತಿದ್ದ. ಈತನ ವಂಚಕತನ ತಿಳಿಯದೆ ಬರುವವರಿಗೆ ತಾನು ಮದುವೆಯಾಗದ ಯುವಕನಂತೆ ನಟಿಸಿ, ಸುಳ್ಳುಹೇಳಿಕೊಂಡು ಈಗಾಗಲೇ ಮೂರು ಮದುವೆಯಾಗಿದ್ದಾನೆ ಆಲ್ದೂರು, ಮೂಡಿಗೆರೆ, ಸಕಲೇಶಪುರದ ಮೂವರನ್ನು ಮದುವೆಯಾಗಿದ್ದ ಎನ್ನಲಾಗಿದೆ.
ಕಳಸ ತಾಲೂಕಿನ ಗೋರಿಮಕ್ಕಿ ಎಂಬಲ್ಲಿನ ಕುಟುಂಬವೊಂದು ಈತನಿಗೆ ಇತ್ತೀಚೆಗಷ್ಟೇ ಪರಿಚಯವಾಗಿ, ಆ ಮನೆಯಲ್ಲಿದ್ದ ಯುವತಿಯನ್ನು ತನ್ನ ಮೋಸದ ಜಾಲದಲ್ಲಿ ಸೆಳೆದು, ಮದುವೆಯಾಗುವುದಾಗಿ ಹೇಳಿ, ಆಕೆಯನ್ನು ಆ.23 ರಂದು ಕರೆದುಕೊಂಡು ತಲೆಮರೆಸಿಕೊಂಡಿದ್ದಾನೆ.
ಇದನ್ನು ತಿಳಿದ ಮೂವರು ಪತ್ನಿಯರು ಚಿಕ್ಕಮಗಳೂರು ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಗೆ ಹೋಗಿ ಅಧಿಕಾರಿಗಳ ಬಳಿ ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.




