ಎದುರು ಮನೆಯ ಮಕ್ಕಳ ಮೇಲೆ ಕುದಿಯುವ ಎಣ್ಣೆ ಹಾಕಿದ ಪ್ರಕರಣ; ಮಹಿಳೆಗೆ 5 ವರ್ಷ ಶಿಕ್ಷೆ

ಕಲಬುರ್ಗಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಕರೆದು ಮೈ ಮೇಲೆ ಕುದಿಯುವ ಎಣ್ಣೆ ಸುರಿಯುವ ಮೂಲಕ ವಿಕೃತಿ ಮೆರೆದಿದ್ದ ಮಹಿಳೆಗೆ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಇಲ್ಲಿನ ಆನಂದನಗರ ಬಡಾವಣೆಯ ನಿವಾಸಿ ಶ್ರೀದೇವಿ ಕೋರವಾರ(57) ಶಿಕ್ಷೆಗೆ ಗುರಿಯಾದ ಮಹಿಳೆ,. 2019ರಲ್ಲಿ ಶ್ರೀದೇವಿ ಮನೆಯ ಮುಂದೆ ಆಟವಾಡಿಕೊಂಡಿದ್ದ ಅಹನಾ ಮತ್ತು ಪಾರ್ವತಿ ಎಂಬ ಎದುರು ಮನೆಯ ಇಬ್ಬರು ಮಕ್ಕಳನ್ನು ಚಾಕಲೇಟ್ ಕೊಡುವುದಾಗಿ ಮನೆಯ ಒಳಗೆ ಕರೆದುಕೊಂಡು ಹೋಗಿ ಕುದಿಯುವ ಅಡುಗೆ ಎಣ್ಣೆಯನ್ನು ಮಕ್ಕಳ ಮೇಲೆ ಸುರಿಯುವ ಮೂಲಕ ಮಕ್ಕಳನ್ನು ಕೊಲೆಗೈಯಲು ಯತ್ನಿಸಿದ್ದಳು. ಇದರಿಂದ ಓರ್ವ ಬಾಲಕಿಗೆ ಹಣೆ, ಎದೆ ಹಾಗೂ ತೊಡೆ ಭಾಗದಲ್ಲಿ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇನ್ನೋರ್ವ ಬಾಲಕಿಗೆ ಕೈಬೆರಳುಗಳು ಸುಟ್ಟುಹೋಗಿದ್ದವು. ಅಕ್ಕಪಕ್ಕದ ಮನೆಯವರಲ್ಲಿ ಉಂಟಾದ ಮನಸ್ತಾಪವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಹಿಳೆ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿದ್ದಳು.
ಈ ಸಂಬಂಧ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಪೋಲಿಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಕುರಿತಾಗಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಶುಕ್ಲಾಕ್ಷ್ ಪಾಲನ್ ಅವರು, ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.




