Arag Jnanedra: ಜೀವ ಮೊದಲು ಆಮೇಲೆ ಜೀವನ: ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಳಗಾವಿ: ಕೋವಿಡ್ ಮೂರನೇ ಅಲೆ ಹರಡುವ ಈ ಸಂದರ್ಭದಲ್ಲಿ ನಾವು ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಜೀವ ಮೊದಲು, ಜೀವನ ಆಮೇಲೆ. ಹಾಗಾಗಿ ಜೀವ ಉಳಿಸುವ ಅವಶ್ಯಕತೆಯಿದೆ. ಎಲ್ಲರೂ ಸಹಕಾರ ಕೊಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿಕೊಂಡಿದ್ದಾರೆ.
ಗೃಹ ಸಚಿವರಾಗಿ ಅಧಿಕಾರ ವಹಿಸಿದ ನಂತರ ಮೊದಲ ಬಾರಿಗೆ ಆರಗ ಜ್ಞಾನೇಂದ್ರ ಬೆಳಗಾವಿಗೆ ಆಗಮಿಸಿದ್ದಾರೆ. ಆರಂಭದಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆರಗ ಜ್ಞಾನೇಂದ್ರ ಭೇಟಿ ನೀಡಿದರು.
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಮೊದಲ ಸಾರಿ ಬೆಳಗಾವಿಗೆ ಬರುತ್ತಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿಗೆ ಒಳ್ಳೆಯ ಫಲಿತಾಂಶ ಕೊಟ್ಟಿರುವ ಬೆಳಗಾವಿ ಜನತೆಗೆ ಮಾಧ್ಯಮಗಳ ಮೂಲಕ ಧನ್ಯವಾದ ಸಲ್ಲಿಸುತ್ತೇನೆ. ನಮಗೆ ಅತ್ಯಂತ ಖುಷಿಯಾಗಿದೆ ಎಂದು ಹೇಳಿದರು. ಪರಾಜಿತ ಅಭ್ಯರ್ಥಿಗಳ ಇವಿಎಂ ಮೇಲಿನ ಆರೋಪದ ಕುರಿತು ಇದೇ ವೇಳೆ ತಿರುಗೇಟು ಕೊಟ್ಟ ಆರಗ ಜ್ಞಾನೇಂದ್ರ ಸೋತವರು ಏನು ಮಾಡುತ್ತಾರೆ, ಗೆದ್ದರೇ ಅದು ಸರಿ ಇದೆ ಎಂದು ಹೇಳುತ್ತಾರೆ. ಸೋತಾರೆ ಅದು ಸರಿ ಇಲ್ಲ ಎನ್ನುತ್ತಾರೆ ಎಂದರು.
ಗಣೇಶೋತ್ಸವ ಆಚರಣೆ ಸಂಬಂಧ ಮಾತನಾಡಿದ ಆರಗ ಜ್ಞಾನೇಂದ್ರ ತಜ್ಞರು ಕೊಟ್ಟಿರುವ ಸಲಹೆ ಆಧಾರದ ಮೇಲೆ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿದೆ. ಎಲ್ಲಾ ಸಮಿತಿ ಜೊತೆ ಚರ್ಚಿಸಿ ಮುಖ್ಯಮಂತ್ರಿಗಳು ಇಡೀ ರಾಜ್ಯಕ್ಕೆ ನಿಯಮ ಅನುಸರಿಸುವಂತೆ ಆದೇಶ ಹೊರಡಿಸಿದ್ದಾರೆ. ಒಂದು ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಹೀಗಾಗಿ ಅದರ ಬಗ್ಗೆ ನಾನು ಬೇರೆ ಏನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ಜೀವ ಮೊದಲು ಆಮೇಲೆ ಜೀವನ ಎಂಬುದನ್ನು ಎಲ್ಲರೂ ಅರಿತು ಸರ್ಕಾರ ನಿಯಮದಂತೆ ಗಣೇಶೋತ್ಸವ ಆಚರಿಸುವಂತೆ ಗೃಹ ಸಚಿವರು ಮನವಿ ಮಾಡಿಕೊಂಡಿದ್ದು ಈ ವೇಳೆ ಕಂಡು ಬಂತು.
