ಚನ್ನಪಟ್ಟಣದ ಬಳಿ ಬೀಡು ಬಿಟ್ಟ ಆನೆ ಹಿಂಡು; ಲಕ್ಷಾಂತರ ರೂ. ಬೆಳೆ ನಷ್ಟ

ರಾಮನಗರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡು ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ಕೆರೆಯಲ್ಲಿ ಬೀಡುಬಿಟ್ಟಿವೆ. ತಿಮ್ಮಸಂದ್ರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕೆರೆಯಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
ಇಂದು ಬೆಳಗಿನಿಂದಲೇ ಆನೆಗಳನ್ನು ನೋಡಲು ಕೆರೆಯ ಬಳಿ ಜನಜಂಗುಳಿ ಸೇರಿದ್ದು ಆನೆಗಳನ್ನು ಕಾಡಿಗೆ ಅಟ್ಟಲು ಜನರ ಚೀರಾಟ ಅರಣ್ಯ ಇಲಾಖೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂದು ಬೆಳಿಗ್ಗೆ ಕೆರೆಯಲ್ಲಿ ಕಾಣಿಸಿಕೊಂಡಿರುವ ಕಾಡಾನೆಗಳು ರಾತ್ರಿ ರೈತರ ಜಮೀನುಗಳಿಗೆ ಲಗ್ಗೆಯಿಟ್ಟು ಬೆಳೆಗಳನ್ನು ನಾಶ ಮಾಡಿವೆ.
ರಾತ್ರಿ ಕೆಂಗಲ್ ಬಳಿಯ ರುದ್ರಪ್ಪ ಎಂಬುವರ ತೋಟಕ್ಕೆ ನುಗ್ಗಿದ ಆನೆಗಳು ತೋಟದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಅಡಿಕೆ, ತೆಂಗು, ಕಾಫಿ,ಮೆಣಸು ಸೇರಿದಂತೆ ಇತರೆ ಬೆಳೆಗಳನ್ನು ತಿಂದು-ತುಳಿದು ಧ್ವಂಶ ಮಾಡಿವೆ. ನಂತರ ಅಲ್ಲಿಂದ ತೆರಳಿರುವ ಆನೆಗಳು ಹಲವು ಗ್ರಾಮಗಳ ಹೊಲ ಗದ್ದೆಗಳಲ್ಲಿ ಬೆಳೆದಿದ್ದ ರಾಗಿ ಭತ್ತ ಸೇರಿದಂತೆ ಹಲವು ಫಸಲು ನಾಶ ನಾಶ ಮಾಡಿ, ಈಗ ತಿಮ್ಮಸಂದ್ರ ಕೆರೆಯಲ್ಲಿ ಬೀಡು ಬಿಟ್ಟಿವೆ.
ನಿರಂತರವಾಗಿ ಈ ಭಾಗದಲ್ಲಿ ಆನೆಗಳು ರೈತರ ಜಮೀನುಗಳಿಗೆ ಗ್ರಾಮಗಳಿಗೆ ನುಗ್ಗುವುದಲ್ಲದೇ ದೊಡ್ಡನಹಳ್ಳಿಯಲ್ಲಿ ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದ್ದವು. ಇದರಿಂದ ಆಕ್ರೋಶಗೊಂಡಿರುವ ರೈತರು ಅರಣ್ಯ ಇಲಾಖೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ




