ದಾವಣಗೆರೆ
ದೇವರಬೆಳಕೆರೆ ಡ್ಯಾಂ ಹಿನ್ನೀರು ಹೆಚ್ಚಿ ರಸ್ತೆ ಸಂಪರ್ಕ ಕಡಿತ; ಜನರ ಅಹವಾಲು ಸ್ವೀಕರಿಸಿದ ಡಿಸಿ

ದಾವಣಗೆರೆ: ಚನ್ನಗಿರಿ ತಾಲೂಕಿನ ಸೂಳೆಕೆರೆಗೆ ಕೋಡಿ ಬಿದ್ದಿದ್ದು, ದಾವಣಗೆರೆ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂಗೆ ಯಥೇಚ್ಛವಾಗಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಹಿನ್ನೀರು ಜಾಸ್ತಿಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸಂಕಲಿಪುರ, ಮುಕ್ತೇನಹಳ್ಳಿ ಗ್ರಾಮಗಳ ಜನರು ರಸ್ತೆ ಸಂಪರ್ಕ ಕಡಿತದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಾತ್ರವಲ್ಲ, ಬೆಳೆದಿದ್ದ ಬೆಳೆ ನಾಶ ಆಗಿರುವ ಜೊತೆಗೆ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದ ನಡುವೆ ಬದುಕು ಮೂರಾಬಟ್ಟೆಯಾಗಿದೆ. ಈ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮೂಲಕ ತೆರಳಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಜನರ ಅಹವಾಲು ಸ್ವೀಕರಿಸಿದರು.
ಸಂಕ್ಲೀಪುರ ಗ್ರಾಮಕ್ಕೆ ಭೇಟಿ ನೀಡಿ ಡಿ ಬಿ ಕೆರೆ ಪಿಕ್ ಅಪ್ ನ ಹಿನ್ನೀರಿನಿಂದ ಭತ್ತಹಾನಿ, ಸಂಕ್ಲೀಪುರ ಹಾಗೂ ಮಕ್ತೇನಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಬಂಧಪಟ್ಟ ಎಲ್ಲಾ ಇಲಾಖೆಗಳೊಂದಿಗೆ ಚರ್ಚಿಸಿ ,ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಡಿಸಿ ಸೂಚನೆ ನೀಡಿದರು.




