ಕೊರೊನಾಕ್ಕೆ ಡೋಂಟ್ ಕೇರ್: ರೇಣುಕಾಚಾರ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ಯುವತಿಯರು, ಮಹಿಳೆಯರು…!

ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಮಹಿಳಾ ಫ್ಯಾನ್ಸ್ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾ ವೇಳೆಯಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಮನರಂಜನೆ, ಊಟದ ವ್ಯವಸ್ಥೆ, ರಸಮಂಜರಿ ಸೇರಿದಂತೆ ಅತ್ಯುತ್ತಮ ಕಾರ್ಯ ಮಾಡಿದ್ದರು. ರೇಣುಕಾಚಾರ್ಯ ಹೋದ ಕಡೆಗಳೆಲೆಲ್ಲಾ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಅದರಲ್ಲಿಯೂ ಈಗ ಮಹಿಳಾಮಣಿಗಳೇ ಹೆಚ್ಚಾಗಿ ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ.
ಹೊನ್ನಾಳಿ ನಗರದ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳಿಗೆ ಕಿರು ಉದ್ಯಮ ಸಾಲ ಹಾಗೂ ಸಮುದಾಯ ಬಂಡವಾಳ ನಿಧಿ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು, ಯವತಿಯರು ತಾ ಮುಂದು ನಾ ಮುಂದು ಅಂತಾ ಮುಗಿಬಿದ್ದು ಸೆಲ್ಫಿ ತೆಗೆದುಕೊಂಡರು. ಈ ವೇಳೆ ಒಂದು ಕ್ಷಣ ರೇಣುಕಾಚಾರ್ಯ ಅವರೇ ಗಲಿಬಿಲಿಗೊಂಡರು.
ಕಾರ್ಯಕ್ರಮದಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಸ್ವಸಹಾಯ ಸಂಘಗಳ ಸದಸ್ಯೆಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ರೇಣುಕಾಚಾರ್ಯ ಅವರು ವೇದಿಕೆಯಿಂದ ಕೆಳಗಿಳಿದು ಬರುತ್ತಿದ್ದಂತೆ ಮಹಿಳೆಯರು, ಯುವತಿಯರು ಸುತ್ತುವರಿದರು. ಕೈಯಲ್ಲಿದ್ದ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರೆ ರೇಣುಕಾಚಾರ್ಯ ಅವರೂ ಸಹ ಸಖತ್ತಾಗಿಯೇ ಫೋಸ್ ಕೊಟ್ಟರು. ತಳ್ಳಾಟ ಆದರೂ ತಲೆಕೆಡಿಸಿಕೊಳ್ಳದ ರೇಣುಕಾಚಾರ್ಯ ಅವರು ಸಮಾಧಾನವಾಗಿಯೇ ಫೋಟೋಗೆ ಫೋಸ್ ಕೊಟ್ಟರು.
ಇನ್ನು ಇಲ್ಲಿಯೇ ಸಂಸದ ಜಿ. ಎಂ. ಸಿದ್ದೇಶ್ವರ್ ಅವರು ಇದನ್ನೆಲ್ಲಾ ನೋಡುತ್ತಿದ್ದರು. ಮಹಿಳೆಯರು ಜಮಾಯಿಸುತ್ತಿದ್ದಂತೆಯೇ ಹೊರನಡೆದರು. ಬಳಿಕವೂ ರೇಣುಕಾಚಾರ್ಯರ ಜೊತೆ ಫೋಟೋ ಸೆಷನ್ ಮುಂದುವರಿಯಿತು.
ಇನ್ನು ಕೆಲವರು ರೇಣುಕಾಚಾರ್ಯ ಅವರಿಗೆ ರಾಖಿ ಕಟ್ಟಿದರು. ಕೊರೊನಾ ಮೂರನೇ ಅಲೆ ಭೀತಿ ಇದ್ದರೂ ಮಹಿಳೆಯರು ಲೆಕ್ಕಿಸದೇ ಫೋಟೋ ತೆಗೆದುಕೊಳ್ಳಲು ಒಬ್ಬರ ಮೇಲೊಬ್ಬರಂತೆ ಮುಗಿಬಿದ್ದರು. ಈ ವೇಳೆ ಕೆಲವರು ಮಾಸ್ಕ್ ಧರಿಸಿದ್ದರೆ ಬಹುತೇಕರು ಮಾಸ್ಕ್ ಹಾಕಿಕೊಂಡಿರಲಿಲ್ಲ. ಸಾಮಾಜಿಕ ಅಂತರ ಮಾಯವಾಗಿತ್ತು.




