ಶಾಸಕ ಎಂಪಿ ಕುಮಾರಸ್ವಾಮಿ ವಿರುದ್ಧ ಸಿ.ಟಿ.ರವಿ ಸಿಡಿಮಿಡಿ

ಚಿಕ್ಕಮಗಳೂರು: ಸಚಿವನಾಗಿದ್ದಾಗ ಮೂಡಿಗೆರೆ ಕ್ಷೇತ್ರಕ್ಕೆ ಆದ್ಯತೆ ನೀಡಿ ಅತಿ ಹೆಚ್ಚು ಅನುದಾನ ಕೊಡಿಸಿದ್ದೇನೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದು ಸ್ವಪಕ್ಷೀಯ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧವೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರು ಪ್ರಶ್ನೆ ಕೇಳುತ್ತಿದ್ದಾಗ ಪ್ರತಿಕ್ರಿಯಿಸುತ್ತಿದ್ದ ಸಿ.ಟಿ ರವಿ ಸಿಡಿಮಿಡಿಗೊಂಡು ಎಂಪಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆ ಕ್ಷೇತ್ರಕ್ಕೆ ಶಕ್ತಿಮೀರಿ ಅನುದಾನ ಕೊಟ್ಟಿದ್ದೇನೆ. ಅನುದಾನ ಕೊಟ್ಟಿಲ್ಲ ಅಂದರೆ ನಾನು ರಾಜೀನಾಮೆ ನೀಡಲು ಸಿದ್ದ. ಅವರು ಸಿದ್ಧವಿದ್ದಾರಾ ಎಂದು ಎಂಪಿ ಕುಮಾರಸ್ವಾಮಿಗೆ ಸವಾಲೆಸೆದಿದ್ದಾರೆ.
ಅನುಮಾನವಿದ್ದರೆ ಜಿಲ್ಲಾಧಿಕಾರಿಗಳ ಬಳಿ ದಾಖಲೆ ತೆಗೆಸಿ ನೋಡಲಿ. ಅವರು ಮೊದಲು ತಮ್ಮ ಕ್ಷೇತ್ರದ ವ್ಯಾಪ್ತಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲಿ. ಕುಮಾರಸ್ವಾಮಿ ತಮ್ಮ ಮನಸ್ಸಲ್ಲಿ ಏನೋ ಇಟ್ಟುಕೊಂಡು ಮಾತಾಡುತ್ತಿದ್ದಾರೆ. ಅವರ ಉದ್ದೇಶವೇ ಬೇರೆ ಇದೆ ಎಂದು ಹೇಳುವ ಮೂಲಕ ಎಂಪಿ ಕುಮಾರಸ್ವಾಮಿ ವಿರುದ್ಧ ತಮಗಿರುವ ಅಸಮಾಧಾನ ಹೊರಹಾಕಿದ್ದಾರೆ.




