ಜೀವ ರಕ್ಷಣೆಗೆ ಪ್ರಥಮ ಚಿಕಿತ್ಸೆ ಅತ್ಯಮೂಲ್ಯ:ಡಾ.ಕೋಡಿರಂಗಪ್ಪ

ಚಿಕ್ಕಬಳ್ಳಾಪುರ: ಪ್ರಸ್ತುತ ಮಾನವ ಸಂಕುಲಕ್ಕೆ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನುಪ್ಪುತ್ತಿರುವ ಹಿನ್ನೆಲೆಯಲ್ಲಿ ಸಕಾಲಕ್ಕೆ ಪ್ರಥಮ ಚಿಕಿತ್ಸೆ ಯು ಜೀವ ರಕ್ಷಣೆಗೆ ಅತ್ಯಮೂಲ್ಯವಾದದ್ದು ಎಂದು ಜಿಲ್ಲಾ ಘಟಕದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ.ಕೋಡಿರಂಗಪ್ಪ ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪ್ರಥಮ ಚಿಕಿತ್ಸಾ ತರಬೇತಿ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಣಾಪಾಯ ಅವಲಂಬಿತ ಹಾಗೂ ದಯನೀಯ ಸ್ಥಿತಿಯಲ್ಲಿರುವ ರೋಗಿಗಳಿಗೆ ಪ್ರಥಮ ಚಿಕಿತ್ಸೆ ಅತೀ ಅವಶ್ಯಕವಾದದ್ದು, ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
2008ರಿಂದ ಜಿಲ್ಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಸುಮಾರು 75 ಸಾವಿರ ಯುನಿಟ್ ರಕ್ತವನ್ನು ಅತ್ಯವಶ್ಯಕವಿರುವ ರೋಗಿಗಳಿಗೆ ಉಚಿತವಾಗಿ ಒದಗಿಸಿದ್ದೇವೆ. ಈ ನಿಟ್ಟಿನಲ್ಲಿ ರಕ್ತವನ್ನು ಸಂಗ್ರಹಣೆ ಮಾಡುವುದು ಮುಖ್ಯವಲ್ಲ ಯುವಕರದಲ್ಲಿ ರಕ್ತದಾನ ಮಾಡುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.
ಬೆಂಗಳೂರು ಘಟಕದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಥಮ ಚಿಕಿತ್ಸಾ ತರಬೇತುದಾರ ಡಾ.ಕೆ.ಪಿ ನಾಗಾರ್ಜುನ ಹಾಗೂ ಮುದ್ದೇನಹಳ್ಳಿ ಸತ್ಯಸಾಯಿ ಸರಳ ಮೇಮೊರಿಯಲ್ ಸಮನ್ವಯ ವೈದ್ಯಾಧಿಕಾರಿಗಳಾದ ಎಮ್.ಸಿ.ಫಣೀಂದ್ರ ಅವರು ಪ್ರಥಮ ಚಿಕಿತ್ಸೆ ಯಾವ ರೀತಿ ನೀಡಬೇಕು ಎಂದು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.




