ಆಸ್ಕರ್ ಫರ್ನಾಂಡಿಸ್ ಯಾವತ್ತೂ ಹಗೆ ರಾಜಕೀಯ ಮಾಡಿದವರಲ್ಲ: ಶಾಸಕ ರಘುಪತಿ ಭಟ್

ಉಡುಪಿ: ಅಜಾತಶತ್ರು ರಾಜಕಾರಣಿ ಆಸ್ಕರ್ ಫರ್ನಾಂಡಿಸ್ ಯಾವತ್ತೂ ಹಗೆ ರಾಜಕೀಯ ಮಾಡಿದವರಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮಾಡಿದಾಗಲೂ ಇವರು ಅದನ್ನು ಬೆಂಬಲಿಸಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಬಿಜೆಪಿ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದ ಅವರು , ನಮ್ಮ ವಿರೋಧ ಪಕ್ಷದವರಾದರೂ ಆಸ್ಕರ್ ಉಡುಪಿಗೆ ನೀಡಿದ ಸೇವೆಯನ್ನು ಸ್ಮರಿಸಬೇಕಾಗಿದೆ. ಅವರು ಕಾರ್ಮಿಕ ಸಂಘಟನೆ ಗಳಿಂದ ಬೆಳೆದ ನಾಯಕ. ಯಾವತ್ತೂ ಆಸ್ಕರ್ ಹಗೆ ರಾಜಕೀಯ ಮಾಡಿದವರಲ್ಲ. ಡಾ. ವಿ ಎಸ್ ಆಚಾರ್ಯ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು. ಯಾವತ್ತೂ ಆಸ್ಕರ್ ಸಣ್ಣಬುದ್ದಿಯನ್ನು ಪ್ರದರ್ಶಿಸಿದವರಲ್ಲ. ಮಾನವೀಯ ಗುಣ ಇರುವ ನಾಯಕ ಅವರಾಗಿದ್ದರು. ನನ್ನ ವೈಯಕ್ತಿಕ ಜೀವನದಲ್ಲಿ ದುರ್ಘಟನೆ ಆದಾಗಲೂ ಸಾಂತ್ವನ ಹೇಳಿದ್ದರು.
ಕಾಂಗ್ರೆಸ್ ಪಕ್ಷದವರು ನನ್ನನ್ನು ಟೀಕಿಸಿದಾಗಲೂ ಮಾನವೀಯ ಗುಣ ತೋರಿದ್ದರು. ಮಾನಸಿಕ ವೇದನೆ ಇದ್ದಾಗ ಸಾಂತ್ವನ ಮಾಡಿದ್ದರು. ಸಹಾಯ ಬೇಕಾದರೆ ಕೇಳಿ ಎಂದಿದ್ದರು. ಅವರ ಸಹಾಯಕ್ಕಿಂತಲೂ ಸಾಂತ್ವನ ದಿಂದ ನಾನು ಹಗುರಾಗಿದ್ದೆ. ಅತ್ಯಂತ ಒಳ್ಳೆಯ ಗುಣ ಹೊಂದಿದ್ದರುಅದೇ ಕಾರಣಕ್ಕೆ ಬೆಂಗಳೂರಿನಿಂದ ಬಂದು ಅಂತಿಮ ದರ್ಶನ ಪಡೆದೆ ಎಂದು ಗುಣಗಾನ ಮಾಡಿದ್ದಾರೆ.




