ದೇಗುಲ ಪ್ರವೇಶಕ್ಕೆ ಅವಕಾಶವಿಲ್ಲ; ಆದರೂ ದೇಗುಲದತ್ತ ಭಕ್ತರ ದಂಡು!

ಬಾಗಲಕೋಟೆ: ರಾಜ್ಯದಲ್ಲಿ ಅನ್ ಲಾಕ್ ಬಹುತೇಕ ಜಾರಿಯಾಗಿದೆ. ಆದರೆ ದೇಗುಲ ಪ್ರವೇಶಕ್ಕೆ ಅವಕಾಶ ಇನ್ನೂ ಸರ್ಕಾರ ಕಲ್ಪಿಸಿಲ್ಲ.ಆದರೆ ದೇಗುಲಕ್ಕೆ ಆಗಮಿಸುವವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
ನಾಡಿನ ಶಕ್ತಿ ಪೀಠಗಳೊಲ್ಲೊಂದಾಗಿರೋ ಬಾದಾಮಿ ಬನಶಂಕರಿ ದೇಗುಲಕ್ಕೆ ಭಕ್ತರು ಹರದು ಬಂದು ಹೊರಗಿನಿಂದಲೇ ದೇವಿಗೆ ಕೈಮುಗಿಯುತ್ತಿದ್ದು,ದೇಗುಲ ಪ್ರವೇಶ ಅವಕಾಶ ನೀಡಿ ಎನ್ನುವ ಬೇಡಿಕೆ ಹೆಚ್ಚಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬನಶಂಕರಿ ದೇಗುಲ ಎರಡನೇ ಅಲೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದಲೂ ಬಾಗಿಲು ಬಂದ್ ಆಗಿದೆ.ನಾಡಿನ ಶಕ್ತಿ ಪೀಠಗಳಲ್ಲೊಂದಾಗಿರುವ ಬಾದಾಮಿ ಬನಶಂಕರಿ ದೇಗುಲ ದರ್ಶನಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಕೋವಿಡ್ ಎರಡನೆ ಅಲೆ ವ್ಯಾಪಕವಾಗಿ ಹರಡುತ್ತಿದ್ದಂತೆ ಜಿಲ್ಲಾಡಳಿತ ಜಿಲ್ಲೆಯ ಪ್ರಮುಖ ದೇಗುಲಗಳ ಬಾಗಿಲು ಬಂದ್ ಗೆ ಸೂಚಿಸಿ ಆದೇಶಿಸಿತ್ತು. ಬಾದಾಮಿ ಬನಶಂಕರಿ ದೇಗುಲಕ್ಕೆ ಹುಣ್ಣಿಮೆ, ಹಾಗೂ ಮಂಗಳವಾರ,ಶುಕ್ರವಾರದಂದು ಭಕ್ತರು ಹರಿದು ಬರುತ್ತಾರೆ. ಆದರೆ ದೇಗುಲಗಳ ಬಾಗಿಲು ಲಾಕ್ ಆಗಿರುವುದರಿಂದ ಭಕ್ತರಿಗೆ ದರ್ಶನ ಭಾಗ್ಯವಿಲ್ಲ.
ಆದರೆ ಕೆಲವು ಭಕ್ತರು ಹೊರಗಡೆಯಿಂದಲೇ ದೇವಿ ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ.ಅರ್ಚಕರು ಬೆಳಿಗ್ಗೆ, ಮಧ್ಯಾಹ್ನ, ಹಾಗೂ ಸಂಜೆ ದೇವಿಗೆ ಪೂಜಾ ಕೈಂಕರ್ಯಗಳನ್ನು ನಡೆಸುತ್ತಾರೆ. ಯಾವುದೇ ಭಕ್ತರಿಗೂ ಪ್ರವೇಶ ಇಲ್ಲ. ಇನ್ನು ದೇಗುಲ ಮುಖ್ಯ ದ್ವಾರ, ದೇಗುಲಕ್ಕೆ ಬರುವ ರಸ್ತೆಗೆ ಬ್ಯಾರಿಕೇಡ್ ಹಾಕಿ ನಿರ್ಬಂಧ ಹಾಕಲಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಬಾದಾಮಿ ಬನಶಂಕರಿ, ಮಹಾಕೂಟೇಶ್ವರ ದೇಗುಲ, ಕೂಡಲಸಂಗಮ ಸಂಗಮನಾಥ್ ದೇಗುಲ, ತುಳಸಿಗೇರಿ ಹನುಮಂತ ದೇಗುಲ ಬಂದ್ ಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು. ಹೀಗಾಗಿ ಭಕ್ತರಿಗೆ ದೇವರ ದರ್ಶನ ಭಾಗ್ಯವಿಲ್ಲದಂತಾಗಿದೆ. ದೇಗುಲದ ಹೊರಗೆ ಭಕ್ತರು ದೇವರಿಗೆ ಕೈಮುಗಿಯುವಂತಾಗಿದೆ. ದೇಗುಲ ಆರಂಭಿಸಿ ಎನ್ನುವ ಭಕ್ತರ ಬೇಡಿಕೆ ಹೆಚ್ಚಾಗುತ್ತಿದೆ. ಅನ್ ಲಾಕ್ ಬಳಿಕ ದೇಗುಲಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ದಿನಕ್ಕೆ ಇನ್ನೂರು, ಮುನ್ನೂರು ಭಕ್ತರು ಆಗಮಿಸುತ್ತಿದ್ದಾರೆ.ದೇಗುಲ ಗರ್ಭ ಗುಡಿ ಪ್ರವೇಶವಿಲ್ಲ.ಕೋವಿಡ್ ನಿಯಮ ಪಾಲನೆಯೊಂದಿಗೆ ಹೊರಗಡೆ ದರ್ಶನಕ್ಕೆ ಅವಕಾಶ ಇದೆ. ಆದರೆ ಯಾವುದೇ ಪೂಜಾ ಸೇವೆಗಳಿಗೆ ಅವಕಾಶ ಇಲ್ಲ. ಸರ್ಕಾರ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೆನ್ನುವುದು ಭಕ್ತರ ಬೇಡಿಕೆ ಎಂದು ಅರ್ಚಕ ಆನಂದ್ ಪೂಜಾರಿ ಹೇಳುತ್ತಾರೆ.




