ತಾಲಿಬಾನ್ ಬಿಕ್ಕಟ್ಟು ಬೆಳಗಾವಿ ಬಾಳೆ ಬೆಳೆಗಾರರು ಕಂಗಾಲು

ಬೆಳಗಾವಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸದಿಂದ ಅರಾಜಕತೆ ತಾಂಡವವಾಡುತ್ತಿರುವುದಕ್ಕೆ ಬೆಳಗಾವಿ ಜಿಲ್ಲೆಯ ಬಾಳೆ ಬೆಳೆಗಾರರು ಕಂಗಾಲಾಗಿದ್ದಾರೆ.
ಅನೇಕ ವರ್ಷಗಳಿಂದ ಬೆಳಗಾವಿ ಜಿಲ್ಲೆ ಮತ್ತು ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಿಂದ ನೂರಾರು ಟನ್ ಬಾಳೆ ಹಣ್ಣು ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಪ್ರತಿ ವರ್ಷ ಆಫ್ಘಾನಿಸ್ತಾನ ಕ್ಕೆ ರಫ್ತು ಆಗುತ್ತದೆ. ಆದರೆ ತಾಲಿಬಾನ್ ಕೈವಶವಾಗಿರುವ ಅಫ್ಘಾನಿಸ್ತಾನದಲ್ಲಿನ ಅರಾಜಕತೆ ಸೃಷ್ಟಿಯಾಗಿರುವುದರಿಂದ ಈ ಬಾರಿ ಯಾವುದೇ ರೀತಿಯ ಬಾಳೆ ರಫ್ತು ಆಗಿಲ್ಲ. ಹೀಗಾಗಿ ಇದರ ನೇರ ಪರಿಣಾಮ ರಾಜ್ಯದ ಬೆಳಗಾವಿ ಜಿಲ್ಲೆಯ ರೈತರಿಗೂ ತಟ್ಟಿದೆ.
ಸದ್ಯ ರಫ್ತು ಮಾಡುವ ಸಲುವಾಗಿಯೇ ಬಾಳೆ ಹಣ್ಣು ಬೆಳೆದಿರುವ ರೈತರು ಹಾಗೂ ದಲ್ಲಾಳಿಗಳು ಮುಂದೇನು ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ. ಸಪ್ಟೆಂಬರ್ ನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ಭಾಗದಿಂದಲೇ ಸುಮಾರು 10 ಕಂಟೇನರ್ ಬಾಳೆ ಅಫ್ಘಾನಿಸ್ತಾನಕ್ಕೆ ರಫ್ತು ಆಗಬೇಕಿತ್ತು.
ಜಿಲ್ಲೆಯಿಂದ 50 ಕಂಟೇನರ್ ಬಾಳೆ ಹೋಗಬೇಕಿತ್ತು. ಆದರೆ ಆ ದೇಶದಲ್ಲಿ ಉಂಟಾಗಿರುವ ಸಮಸ್ಯೆಯ ಕಾರಣದಿಂದ ಬಾಳೆ ರಫ್ತು ಮಾಡಲಿದ್ದ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿ ಆಗಿದೆ. ಇರಾನ್ ನಂತರ ಭಾರತದಿಂದ ಅತಿ ಹೆಚ್ಚು ಬಾಳೆ ಅಫ್ಘಾನಿಸ್ತಾನಕ್ಕೆ ರವಾನೆಯಾಗುತ್ತದೆ.
