ಹುಣಸೂರಿನಲ್ಲಿ ಜನರ ಮಾತು ಕೇಳದೆ ತಪ್ಪು ಮಾಡಿದ್ದೆ; ಮತ್ತೆ ತಪ್ಪಾಗದು: ಜಿಟಿಡಿ

ಮೈಸೂರು: ಚುನಾವಣೆ ಇನ್ನೂ 23 ತಿಂಗಳು ಇದೆ. ಈಗಲೇ ಮುಂದೆ ಹಿಂದೆ ಎನ್ನುವ ಚರ್ಚೆ ಬೇಡ. ಯಾರು ಮುಂದೆ ಹೋಗಬೇಕು ಎಂಬುದನ್ನು ಮತದಾರ ತೀರ್ಮಾನ ಮಾಡುತ್ತಾನೆ ಎಂದು ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಅವರಿಗೆ ಮಾಜಿ ಸಚಿವ ಜಿ ಟಿ ದೇವೇಗೌಡ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಮೀಸಲಾತಿ ಪ್ರಕಟ ವಿಚಾರ ಸಂಬಂಧ ಈಗ ಮೀಸಲಾತಿ ಪ್ರಕಟವಾಗಿದೆ. ಮೀಸಲಾತಿ ಬಗ್ಗೆ ಅಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಅಲ್ಲದೇ ಚುನಾವಣೆ ನಡೆಯಲು ಇನ್ನೂ ಸಮಯ ಇದೆ. ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಬಹುದು. ಕಾದು ನೋಡೋಣ ಎಂದು ಶಾಸಕ ಜಿ ಟಿ ದೇವೇಗೌಡ ತಿಳಿಸಿದರು.
ತಾವು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಜಿ.ಟಿ ದೇವೇಗೌಡ, ಜನರನ್ನು ಕೇಳಿ ನಾನು ತೀರ್ಮಾನ ಮಾಡುತ್ತೇನೆ. ಹಿಂದೆ ಹುಣಸೂರಿನಲ್ಲಿ ಜನರ ಮಾತು ಕೇಳದೆ ತಪ್ಪು ಮಾಡಿದ್ದೇನೆ. ಮತದಾರ ಮಾತು ಕೇಳದೆ ಬಿಜೆಪಿ ಸೇರಿ ಸೋತಿದ್ದೆ. ಆಂತಹ ತಪ್ಪು ಮತ್ತೆ ಮಾಡಲ್ಲ. ಶೀಘ್ರದಲ್ಲೇ ಗ್ರಾಮೀಣ ಭಾಗದ ಪ್ರವಾಸ ಮಾಡುತ್ತೇನೆ. ಪ್ರತಿಯೊಬ್ಬ ಮತದಾರನ ಅಭಿಪ್ರಾಯ ಸಂಗ್ರಹ ಮಾಡುವೆ. ನಾನು ಜೆಡಿಎಸ್ ನಲ್ಲೇ ಇರಬೇಕಾ.? ಕಾಂಗ್ರೆಸ್ ಸೇರಬೇಕಾ? ಅಥವಾ ಬಿಜೆಪಿಗೆ ಹೋಗಬೇಕಾ.? ಇದೆಲ್ಲವನ್ನು ಈ ಬಾರಿ ಜನರು ತೀರ್ಮಾನ ಮಾಡುತ್ತಾರೆ. ಸದ್ಯ ಕೊರೊನಾ ಕಡಿಮೆ ಆದ ನಂತರ ಕ್ಷೇತ್ರ ಪ್ರವಾಸ ಮಾಡುವೆ. ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹ ಮಾಡಿ ತೀರ್ಮಾನ ಮಾಡುವೆ ಎಂದು ತಿಳಿಸಿದರು.
ಶಾಲೆಯೂ ಉಳಿಯಲಿ, ಸ್ಮಾರಕವೂ ನಿರ್ಮಾಣವಾಗಲಿ..!
ಎನ್.ಟಿ.ಎಂ ಶಾಲೆ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಶಾಲೆಯೂ ಉಳಿಯಲಿ, ಸ್ಮಾರಕವೂ ನಿರ್ಮಾಣವಾಗಲಿ..! ಶಾಲೆಯನ್ನ ಉಳಿಸಿ ಸ್ಮಾರಕ ನಿರ್ಮಾಣ ಮಾಡಲು ಅವಕಾಶ ಇದೆ.ಮೈಸೂರಿನಲ್ಲಿ ಬಹಳಷ್ಟು ಜನ ಸಾಹಿತಿಗಳು, ಬುದ್ದಿ ಜೀವಿಗಳಿದ್ದಾರೆ. ಇಂತಹ ಸ್ಥಳದಲ್ಲಿ ಈ ವಿಚಾರವನ್ನು ದೊಡ್ಡದು ಮಾಡಬಾರದು. ಎಲ್ಲರೂ ಕೂತು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಿ. ಅನಾವಶ್ಯಕವಾಗಿ ಚರ್ಚೆ ಬೇಡ ಎಂದು ಸಲಹೆ ನೀಡಿದರು.
