Breaking NewsLatestಮೆಟ್ರೋರಾಜಕೀಯರಾಜ್ಯಸುದ್ದಿ

ಕೇಂದ್ರ ಬಜೆಟ್, ಕೋವಿಡ್ ಸಂತ್ರಸ್ತರಿಗೆ ಪರಿಹಾರ ಘೋಷಿಸಲಿ, ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಜನ ಕೋವಿಡ್ ನಿಂದ ಸತ್ತಿದ್ದು, ಅದರಲ್ಲಿ ಕೆಲವರಿಗೆ ಮಾತ್ರ 1 ಲಕ್ಷ ರೂ. ಪರಿಹಾರ ನೀಡಲು ಸರಕಾರ ಮುಂದಾಗಿದೆ. ಸರ್ಕಾರ ಈ ಹಿಂದೆ 4 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ನ್ಯಾಯಾಲಯ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೋವಿಡ್ ನಿಂದ ಸತ್ತವರಿಗೆ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶನ ನೀಡಿದ್ದು, ಸತ್ತವರ ಕುಟುಂಬಕ್ಕೆ 4 ಲಕ್ಷ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.  

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆ ಸೇರಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವವರಿಗೆ ಪರಿಹಾರ ಕೊಡಬೇಕು. ರೈತರಿಗೆ, ಕಾರ್ಮಿಕರಿಗೆ ಆಗಿರುವ ನಷ್ಟ ಭರಿಸಬೇಕು. ವೃತ್ತಿ ಕಳೆದುಕೊಂಡವರಿಗೆ ಸರ್ಕಾರ ಈ ಬಜೆಟ್ ನಲ್ಲಿ ಹಣ ಒದಗಿಸುವ ನಿರೀಕ್ಷೆ ನಮ್ಮದಾಗಿದೆ ಎಂದರು.

ಸಿಮೆಂಟ್ ಹಾಗೂ ಕಬ್ಬಿಣದ ಬೆಲೆಗಳು ಏರಿಕೆಯಾಗಿದ್ದು, ಕೇಂದ್ರ ಸರ್ಕಾರ ಕಬ್ಬಿಣ ಹಾಗೂ ಸೀಮೆಂಟ್ ವ್ಯಾಪಾರಿಗಳ ಲಾಬಿಗೆ ಮಣಿಯುತ್ತಿರುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ಕಬ್ಬಿಣದ ಬೆಲೆ 30, 35 ಸಾವಿರಕ್ಕೆ ಇಳಿಯಬೇಕು. ಸೀಮೆಂಟ್ ಬೆಲೆ ಕೂಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಎಸ್.ಆರ್ ಪಾಟೀಲ್ ದಡ್ಡರಲ್ಲ

ನಿನ್ನೆ ಹುಬ್ಬಳ್ಳಿಯಲ್ಲಿ ಎಸ್.ಆರ್ ಪಾಟೀಲ್ ಹಾಗೂ ಸಿ.ಎಂ. ಇಬ್ರಾಹಿಂ ಅವರ ಭೇಟಿ ವೇಳೆ ಅಲ್ಪಸಂಖ್ಯಾತ ಹಾಗೂ ಲಿಂಗಾಯತರ ಸಮಾವೇಶದ  ಬಗ್ಗೆ ಚರ್ಚೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಎಸ್.ಆರ್ ಪಾಟೀಲ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ದಡ್ಡರಲ್ಲ. ಅವರು ಅಧಿಕಾರದ ಆಮಿಷಕ್ಕೆ ಒಳಗಾಗಿ ಈ ರೀತಿ ಚರ್ಚೆ ಮಾಡುವುದಿಲ್ಲ. ಇಬ್ರಾಹಿಂ ಅವರು ಹಿರಿಯ ನಾಯಕರು, ಇನ್ನೂ ನಮ್ಮ ಪಕ್ಷದಲ್ಲೇ ಇದ್ದಾರೆ, ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಅವರ ಜತೆ ಮಾತನಾಡುವುದರಲ್ಲಿ ತಪ್ಪಿಲ್ಲ. ಇದನ್ನು ರಾಜಕೀಯವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ’ ಎಂದು ಉತ್ತರಿಸಿದರು.  

ಕೋವಿಡ್ ತೊಂದರೆ ನಿಲ್ಲಿಸಲಿ

ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭ ಮಾಡುವುದು ಯಾವಾಗ ಎಂಬ ಪ್ರಶ್ನೆಗೆ, ‘ಮೊದಲು ಕೋವಿಡ್ ಹೆಸರಲ್ಲಿ ಚಿತ್ರರಂಗದವರಿಗೆ, ಕ್ರೀಡಾ ಕ್ಷೇತ್ರದವರಿಗೆ ನೀಡುತ್ತಿರುವ ತೊಂದರೆಯನ್ನು ನಿಲ್ಲಿಸಲಿ. ಕೇವಲ ರಾಜಕಾರಣವನ್ನು ಮನಸಿನಲ್ಲಿಟ್ಟುಕೊಂಡು ನಿರ್ಬಂಧ ಹಾಕುತ್ತಿದ್ದಾರೆ. ಅವರು ಎಷ್ಟು ದಿನ ತಡ ಮಾಡುತ್ತಾರೋ ಅಷ್ಟು ದಿನ ತಡೆಯಬಹುದು. ಅವರು ನಿರ್ಬಂಧ ತೆರವು ಮಾಡಲೇಬೇಕಲ್ಲವೇ? ಚುನಾವಣೆ ನಡೆಸಲೇಬೇಕಲ್ಲವೇ? ಎಂದರು.

ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯಗಳ ಚುನಾವಣೆಗಳಲ್ಲಿ ಯಾವ ರೀತಿ ನಿರ್ಬಂಧ ಹಾಕುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೇವೆ. ಚಿತ್ರರಂಗದವರು ಸರ್ಕಾರ ಅವರ ಪರವಾಗಿ ನಿಲ್ಲಲಿದೆ ಎಂದು ಈಗಲೂ ಕಾಯುತ್ತಿದ್ದಾರೆ. ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ಮುಂದುವರಿಸಲಿ, ಬೇಡ ಎನ್ನುವುದಿಲ್ಲ. ಆದರೆ ನಿರ್ಬಂಧಗಳನ್ನು ತೆಗೆದು ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಿ’ ಎಂದು ಆಗ್ರಹಿಸಿದರು.

ಗೋವಾದಲ್ಲಿ ಕಾಂಗ್ರೆಸ್ ಖಚಿತ

ಗೋವಾ ಚುನಾವಣೆ ಪ್ರಚಾರಕ್ಕೆ ತೆರಳಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ಗೋವಾ ಪ್ರಚಾರಕ್ಕೆ ಹೋಗಿದ್ದೆ. ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಗೋವಾ ಜನ ಸಂಕಲ್ಪ ಮಾಡಿದ್ದಾರೆ. ಅವರಿಗೆ 10 ವರ್ಷಗಳ ಕಾಲ ಅಧಿಕಾರ ನೀಡಿದ್ದರು. ಕಳೆದಬಾರಿ ಆಪರೇಷನ್ ಕಮಲದಿಂದ ಅಲ್ಲಿ ಬಿಜೆಪಿ ಸರ್ಕಾರ ಮಾಡಿತ್ತು. ಈ ವರ್ಷ ಹಾಲಿ ಶಾಸಕರೇ ಬಿಜೆಪಿ ತೊರೆದಿದ್ದು, ಈ ಬಾರಿ ಕಾಂಗ್ರೆಸ್ ಸರ್ಕಾರ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೆಗಾಸಸ್ ಕದ್ದಾಲಿಕೆಗೆ ಕ್ಷಮೆಯಾಚಿಸಲಿ

ಪೆಗಾಸಸ್ ಕದ್ದಾಲಿಕೆ ಪ್ರಕರಣದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸರ್ಕಾರ ಭದ್ರತೆ ಹೆಸರಲ್ಲಿ ಈ ರೀತಿ ಕದ್ದಾಲಿಕೆ ಯಾಕೆ ಮಾಡುತ್ತಿದೆಯೋ ಗೊತ್ತಿಲ್ಲ. ಈ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಇತರರು ಪಕ್ಷದ ನಿಲುವು ಪ್ರಕಟಿಸಿದ್ದು, ನಾನು ಅದಕ್ಕೆ ಬದ್ಧನಾಗಿದ್ದೇನೆ. ಈ ವಿಚಾರದಲ್ಲಿ ಸರ್ಕಾರ ಸತ್ಯಾಂಶ ಒಪ್ಪಿಕೊಂಡು ದೇಶದ ಜನರ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button