ಮತ್ತೆ ಬೇಸರಗೊಂಡಿರುವ ಶ್ರೀರಾಮುಲು; ರಾಜೀನಾಮೆ ಬೆದರಿಕೆ ಹಾಕಿದ ಆನಂದ್ ಸಿಂಗ್

ಬೆಂಗಳೂರು: ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನವೂ ಸ್ಪೋಟವಾಗಿದೆ. ಮುಖ್ಯವಾಗಿ ಶ್ರೀರಾಮುಲು ಮತ್ತು ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಹುದ್ದೆ ನಿರೀಕ್ಷೆಯಲ್ಲಿದ್ದ ಶ್ರೀರಾಮುಲು, ಆ ಹುದ್ದೆ ಇಲ್ಲವೆಂದಾದ ಮೇಲೆ ಸಮಾಜ ಕಲ್ಯಾಣ ಇಲಾಖೆಯಾದರೂ ಸಿಕ್ಕೀತು ಎಂಬ ನಿರೀಕ್ಷೆ ಹೊಂದಿದ್ದರು ಎನ್ನಲಾಗಿದೆ. ಸಮಾಜ ಕಲ್ಯಾಣ ಇಲಾಖೆಯೂ ಸಿಗದಿರುವುದು ಅವರ ಅಸಮಾಧಾನಕ್ಕೆ ಕಾರಣ. ಶ್ರೀರಾಮುಲು ಅವರಿಗೆ ಈಗ ಸಾರಿಗೆ ಮತ್ತು ಹೊಸದಾಗಿ ರಚಿಸಲಾಗಿರುವ ಪರಿಶಿಷ್ಟ ಪಂಗಡ ಅಭಿವೃದ್ಧಿ ಖಾತೆಯ ಹೊಣೆ ನೀಡಲಾಗಿದೆ.
ಇನ್ನೊಂದೆಡೆ ಆನಂದ್ ಸಿಂಗ್, ತಾವು ಕೇಳಿದ್ದ ಇಂಧನ ಇಲ್ಲವೆ ಲೋಕೋಪಯೋಗಿ ಖಾತೆ ಸಿಗಲಿಲ್ಲವೆಂಬ ಕಾರಣಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ನನಗೇನು ಬೇಕು ಎಂಬುದರ ಬಗ್ಗೆ ಸಿಎಂ ಬೊಮ್ಮಾಯಿ ಮತ್ತು ಯಡಿಯೂರಪ್ಪ ಇಬ್ಬರ ಬಳಿಯೂ ಕೇಳಿಕೊಂಡಿದ್ದೆ. ಆದರೆ ಬೇಡದ ಖಾತೆ ಕೊಟ್ಟಿದ್ದು, ಖಾತೆ ಬದಲಿಸದಿದ್ದರೆ ರಾಜೀನಾಮೆಗೂ ಸಿದ್ಧ ಎಂದಿದ್ದಾರೆ. ನಾಳೆ ಸಿಎಂ ಭೇಟಿಯಾಗಿ ಮಾತನಾಡುವುದಾಗಿಯೂ ಅವರು ಹೆಳಿದ್ದಾರೆ.
ಈ ಮಧ್ಯೆ ಸಚಿವ ಸೋಮಣ್ಣ ಪ್ರತಿಕ್ರಿಯಿಸಿ, ಆನಂದ್ ಸಿಮಗ್ ಆವೇಶದಿಂದ ಮಾತನಾಡಿರಬಹುದು. ಯಾವುದೇ ಖಾತೆಗೂ ಅದರದ್ದೇ ಮಹತ್ವ ಇರುತ್ತದೆ ಎಂದಿದ್ದಾರೆ.
ಎಂಟಿಬಿ ನಾಗರಾಜ್ ಕೂಡ ಕಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಯಡಿಯೂರಪ್ಪನವರಾಗಲಿ, ಬೊಮ್ಮಾಯಿಯವರಾಗಲಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದಿದ್ದಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿಯೂ ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
