ಸಿಎಂ ನಂಬಿಕೆ ಹುಸಿಯಾಗದಂತೆ ಖಾತೆ ನಿರ್ವಹಿಸುವೆ: ಆರಗ ಜ್ಞಾನೇಂದ್ರ

ಚಿಕ್ಕಮಗಳೂರು: ಗೃಹ ಇಲಾಖೆ ಬಹಳ ಸೂಕ್ಷವಾಗಿದ್ದು, ಇದರ ನಿರ್ವಹಣೆ ಹೊಣೆಯನ್ನು ನನಗೆ ಕೊಟ್ಟಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಂಬಿಕೆ ಹುಸಿಯಾಗದಂತೆ ಸೇವೆ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ರಾಜ್ಯದ ನೂತನ ಗೃಹ ಸಚಿವರಾಗಿ ನೇಮಕವಾಗಿರುವ ಅವರು ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿ ಎನ್ ಆರ್ ಪುರ ತಾಲೂಕಿನಲ್ಲಿ ಮಳೆಯಿಂದ ಆಗಿರುವ ಅವಘಡಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾವ ಖಾತೆಯೂ ದೊಡ್ಡದಲ್ಲ, ಯಾವ ಖಾತೆಯೂ ಸಣ್ಣದಲ್ಲ. ನಿಭಾಯಿಸುವ ವ್ಯಕ್ತಿಯ ಮೇಲೆ ನಿರ್ಧಾರವಾಗುತ್ತದೆ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದಿದ್ದೆ. ಗೃಹಖಾತೆ ಸಿಗಬಹುದೆಂದು ನಾನು ನಿರೀಕ್ಷಿಸಿರಲಿಲ್ಲ. ಅತ್ಯಂತ ಮಹತ್ತರವಾದ ಖಾತೆ ಸಿಕ್ಕಿದೆ. ಜನರ ರಕ್ಷಣೆ, ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವಂತಹ ಬಹೂದೊಡ್ಡ ಹೊಣೆಗಾರಿಕೆಯಿದೆ. ಇದನ್ನು ಯಶಸ್ವಿಯಾಗಿ ನಿರ್ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಮಾಜಿ ಸಚಿವ ಡಿ.ಎನ್ ಜೀವರಾಜ್, ಜಿಲ್ಲಾಧಿಕಾರಿ ಕೆ.ಎನ್ ರಮೇಶ್, ಎಸ್ಪಿ ಅಕ್ಷಯ್ ಎಂ.ಎಚ್, ಜಿಪಂ ಸಿಇಒ ಜಿ.ಪ್ರಭು, ಉಪವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜ್ ಮತ್ತಿತರರು ಇದ್ದರು.
