
ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಕೊನೆಗೂ ಕಾಂಗ್ರೆಸ್ ಪಕ್ಷ ತ್ಯಜಿಸಲು ಹಿರಿಯ ಧುರೀಣ ಸಿ.ಎಂ.ಇಬ್ರಾಹಿಂ ತೀರ್ಮಾನಿಸಿದ್ದಾರೆ. ಮೇಲ್ಮನೆ ಪ್ರತಿಪಕ್ಷದ ನಾಯಕರಾಗಿ ಬಿ.ಕೆ.ಹರಿಪ್ರಸಾಧ್ ಅವರನ್ನು ನೇಮಿಸಿದ ಬೆನ್ನಲ್ಲೇ ಇಬ್ರಾಹಿಂ ಅವರಿಂದ ಈ ನಿರ್ಧಾರ ಹೊರಬಿದ್ದಿದೆ. ಈ ಸಂಬಂಧ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಬಿಜೆಪಿಯನ್ನು ಸೇರಲ್ಲ, ಅದು ಕೇಶವ ಕೃಪ ಎಂದಿರುವ ಇಬ್ರಾಹಿಂ ಜೆಡಿಎಸ್ ಸೇರುವ ಸಾಧ್ಯತೆಗಳು ನಿಚ್ಚಳವಾಗಿದೆ. ಶೀಘ್ರವೇ ತಮ್ಮ ನಿರ್ಧಾರ ತಿಳಿಸುವುದಾಗಿ ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ಧಾರೆ. ನಿರ್ಧಾರ ತೆಗೆದುಕೊಳ್ಳಲು ನಾನೀಕ ಸ್ವತಂತ್ರ ಎಂದೂ ಅವರು ಹೇಳಿದ್ದಾರೆ.
ಕಾಂಗ್ರೆಸ್ ಸಂಕ್ರಾಂತಿ ಗಿಫ್ಟ್ !
ಪಕ್ಷ ಬಿಡುವ ನಿರ್ಧಾರ ಕುರಿತು ಒಂದೇ ಬಾರಿ ಎಲ್ಲ ವಿಚಾರಗಳನ್ನು ನಾನು ಹೇಳಲ್ಲ.ಕಂತು ಕಂತಾಗಿ ಹೇಳುತ್ತೇನೆ ಎಂದಿರುವ ಇಬ್ರಾಹಿಂ, ಚಾಮುಂಡೇಶ್ವರಿಯಲ್ಲಿ ಸೋಲಿನ ಸುಳಿವನ್ನರಿತು, ಬಾದಾಮಿಯಲ್ಲಿ ನಾಮಪತ್ರ ಹಾಕಿಸಿ, ಸಿಎಂ ಮಾಡಿದ್ದಕ್ಕೆ ಸಿದ್ದರಾಮಯ್ಯ ಗಿಫ್ಟ್ ನೀಡಿದ್ದಾರೆ. ಅದನ್ನು ಸಂತೋಷದಿಂದ ಸ್ವೀಕರಿಸುವೆ. ಅದೇ ರೀತಿ ಏಐಸಿಸಿ ನನಗೆ ಸಂಕ್ರಾಂತಿ ಉಡುಗೊರೆ ನೀಡಿದೆ. ಅದನ್ನೂ ಸಂತೋಷದಿಂದ ಸ್ವೀಕರಿಸುವೆ ಎಂದಿದ್ದಾರೆ.
ಮೇಲ್ಮನೆ ಸ್ಥಾನಕ್ಕೆ ಶೀಘ್ರ ರಾಜಿನಾಮೆ ನೀಡುತ್ತೇನೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸಂಪರ್ಕಿಸಿ ರಾಜಕೀಯ ತೀರ್ಮಾನ ಕೈಗೊಳ್ಳುತ್ತೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಹೊಂದಿಕೊಳ್ಳಲು ಆಗಲ್ಲ. ಆದರೆ, ಸಿದ್ದರಾಮಯ್ಯ ಜತೆ ಸಂಬಂಧ ಚೆನ್ನಾಗಿತ್ತು. ವಿಧಾನಪರಿಷತ್ ನಲ್ಲಿ ಸ್ಥಾನ ತಪ್ಪಿಸಿದ ಬಗ್ಗೆ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಅವರು ಹೇಳಿದರು.
ಕುಮಾರಸ್ವಾಮಿ ಕರೆ
ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ಬೆಳಗ್ಗೆ ತಮಗೆ ಕರೆ ಮಾಡಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ ಎಂದ ಇಬ್ರಾಹಿಂ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 120 ರಿಂದ 80ಕ್ಕೆ ಕುಸಿದಿದೆ. 80 ರಿಂದ ಇನ್ನಷ್ಟು ಕುಸಿಯುತ್ತದೆ ನೋಡತ್ತಲಿರಿ ಎಂದರು.
ಮೈತ್ರಿ ಸರ್ಕಾರ
2023ರಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಲಿದೆ. ಆದರೆ ಕಾಂಗ್ರೆಸ್ ನಾಯಕರು ತಾವು ಗೆಲ್ಲುತ್ತೇವೆ ಎಂದು ಭ್ರಮೆಯಲ್ಲಿದ್ದಾರೆ ಎಂದು ಹೇಳಿದ ಸಿ.ಎಂ.ಇಬ್ರಾಹಿಂ, ಕೇವಲ ಮುಸ್ಲಿಮರು ಮಾತ್ರ ಈಗ ಕಾಂಗ್ರೆಸ್ ಮತದಾರರಾಗಿ ಉಳಿದಿದ್ದಾರೆ. ಮುಸ್ಲಿಮರ ನಂತರ ಕಾಂಗ್ರೆಸ್ ಬರಿದಾಗಲಿದೆ ಎಂದರು.
