ನಾನು ಮಾತಾಡಿದರೆ ರಾಜಕೀಯ ಧ್ರುವೀಕರಣ; ಯೋಗಿ ‘ಅಬ್ಬಾ ಜಾನ್’ ಎಂದರೆ ಏನು?: ಓವೈಸಿ
ಅಹಮದಾಬಾದ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ಅಬ್ಬಾ ಜಾನ್’ ಹೇಳಿಕೆಗೆ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಉತ್ತರ ಪ್ರದೇಶದಲ್ಲಿ ಓವೈಸಿ ರಾಜಕೀಯ ಧ್ರುವೀಕರಣ ಮಾಡುತ್ತಿದ್ದಾರೆಂದು ಯೋಗಿ ಆದಿತ್ಯನಾಥ್ ಹೇಳುತ್ತಿರುವ ಬಗ್ಗೆ ಕೇಳಿದ್ದಕ್ಕೆ ಅವರು ಪ್ರತಿಕ್ರಿಯಿಸಿದರು. ನಾನು ಮಾಡುತ್ತಿರುವುದು ರಾಜಕೀಯ ಧ್ರುವೀಕರಣ ಎಂದು ಭಾವಿಸುವುದಾದರೆ ಅವರೇಕೆ ‘ಪಿತಾಜೀ’ ಎಂಬುದರ ಬದಲು ‘ಅಬ್ಬಾ ಜಾನ್’ ಎಂಬ ಪದವನ್ನು ಬಳಸಿದರು? ಅವರು ‘ಪಿತಾಜೀ’ ಎಂದೇ ಬಳಸಬೇಕಿತ್ತು. ನಿರ್ದಿಷ್ಟವಾಗಿ ಗುರಿಯಿಟ್ಟು ಹೊಡೆಯುವ ರಾಜಕಾರಣವನ್ನು ಯೋಗಿ ಮಾಡುತ್ತಿದ್ದಾರೆ ಎಂದರು.
ಉತ್ತರ ಪ್ರದೇಶದ ಒಬ್ಬನೇ ಒಬ್ಬ ಮುಸ್ಲಿಂನೂ ಕಳೆದ ಐದು ವರ್ಷಗಳಲ್ಲಿ ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ ಒಂದೇ ಮನೆ ಪಡೆದಿಲ್ಲ ಎಂದು ಓವೈಸಿ ಹೇಳಿದರು.
ಉತ್ತರ ಪ್ರದೇಶದಲ್ಲಿ ಉತ್ತಮ ಆಡಳಿತ ಎಂದು ಬಿಂಬಿಸಲು ಸಿಎಂ ಸುಳ್ಳು ಅಂಕಿಅಂಶಗಳನ್ನು ಕೊಡುತ್ತಾರೆ ಎಂದು ಓವೈಸಿ ಆರೋಪಿಸಿದರು.
2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಎಲ್ಲಾ ಶಕ್ತಿಯೊಂದಿಗೆ ಸ್ಪರ್ಧಿಸಲಿದೆ ಎಂದು ಓವೈಸಿ ಈ ಸಂದರ್ಭದಲ್ಲಿ ಹೇಳಿದರು.
