ಮತಾಂತರ ದಂಧೆ ಮಟ್ಟ ಹಾಕಲು ಸರ್ಕಾರ ಬದ್ಧ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಮತಾಂತರಕ್ಕೆ ಸಂಬಂಧಿಸಿದ ವಿಚಾರ ವಿಧಾನಸಭೆಯಲ್ಲಿಂದು ಗಂಭೀರ ಚರ್ಚೆಗೆ ಗ್ರಾಸವಾಯಿತು. ಶಾಸಕರೇ ತನ್ನ ತಾಯಿ ಮತಾಂತರವಾಗಿ ತನ್ನ ಮನೆಯಲ್ಲಿ ನೆಟ್ಟಿಗೆ ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕ, ಕಳವಳ, ಬೇಸರ ತೋಡಿಕೊಂಡ ಪ್ರಸಂಗವೂ ನಡೆಯಿತು.
ಶೂನ್ಯವೇಳೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ವಿಷಯ ಪ್ರಸ್ತಾಪಿಸಿ ಮತಾಂತರಕ್ಕೆ ಅಮಾಯಕ ಜನರು ತುತ್ತಾಗುತ್ತಿದ್ದಾರೆ. ಇದಕ್ಕೆ ನನ್ನ ತಾಯಿಯೇ ಉದಾಹರಣೆಯಾಗಿದ್ದಾರೆ. ಮನೆಯಲ್ಲಿ ಕ್ರಿಶ್ಚಿಯನ್ ಪದ್ಧತಿ ಅನುಸರಿಸುವುದು. ಕ್ರೈಸ್ತ ಸಮುದಾಯದ ಹಾಡುಗಳನ್ನು ಹೇಳುವುದನ್ನು ಮಾಡುತ್ತಿದ್ದು ಇದರಿಂದ ನನಗೆ ಒಂದು ರೀತಿ ಮುಜುಗರವಾಗುತ್ತಿದೆ ಎಂದರು.
ನನ್ನ ಮನೆಯಲ್ಲಿಯೇ ತಾಯಿಯೊಂದಿಗೆ ಹಿಂದೂ ಸಂಪ್ರದಾಯದ ಪ್ರಕಾರ ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಬೇರೆಯವರ ಪಾಡೇನು ? ಆಸೆ, ಆಮಿಷಗಳನ್ನೊಡ್ಡಿ ಬಡವರು ಮತ್ತು ಹಿಂದುಳಿದವರು, ಪರಿಶಿಷ್ಠ ಜಾತಿ ವರ್ಗದವರನ್ನು ಚರ್ಚ್ಗಳಿಗೆ ಕರೆದುಕೊಂಡು ಹೋಗಿ ಮತಾಂತರ ಮಾಡಲಾಗುತ್ತಿದೆ ಇದನ್ನು ತಡೆಯಬೇಕು. ಇಲ್ಲದಿದ್ದರೆ ಅಶಾಂತಿಗ ಕಾರಣವಾಗಲಿದೆ ಎಂದು
ಇದಕ್ಕೆ ಕೆ.ಜಿ.ಬೋಪಯ್ಯ ಸೇರಿದಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರು ದನಿಗೂಡಿಸಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸರ್ಕಾರದ ಗಮನ ಸೆಳೆದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರಿಸಿ ದೇಶದಲ್ಲಿ ಮತಾಂತರದ ದೊಡ್ಡ ದಂಧೆ ನಡೆಯುತ್ತಿದೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ಆಸೆ, ಆಮಿಷಗಳನ್ನೊಡ್ಡಿ ಮತಾಂತರ ಮಾಡುವುದು ಅಕ್ಷಮ್ಯ ಅಪರಾಧ ಇದನ್ನು ಬಗ್ಗುಬಡಿಯಲೇ ಬೇಕು ಎಂದರು.
ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮತಾಂತರ ತಡೆಯಲು ಬೇರೆ ಬೇರೆ ರಾಜ್ಯಗಳೂ ಕಾನೂನುಗಳನ್ನು ಜಾರಿಗೆ ತಂದಿವೆ. ಅವುಗಳನ್ನು ತರಿಸಿಕೊಂಡು ಪರಾಮರ್ಶೆ ಮಾಡಿ ಸೂಕ್ತ ಕಾನೂನು ರೂಪಿಸುವಂತೆ ಸಲಹೆ ನೀಡಿದರು.
ಉತ್ತರ ಮುಂದುವರಿಸಿದ ಸಚಿವರು, ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಲ್ಲಿನ ಮತಾಂತರ ತಡೆ ಕಾನೂನು ತರಿಸಿಕೊಂಡು ಈ ದಂಧೆಯನ್ನು ಮಟ್ಟಹಾಕಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
