ಶಾಸಕ ಪ್ರೀತಂ ಗೌಡ ಇತಿಮಿತಿ ಅರಿತು ಮಾತನಾಡಲಿ: ಸಚಿವ ಸೋಮಣ್ಣ

ಬೆಂಗಳೂರುಳ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ರಾಜ್ಯ ಕಂಡ ಮುತ್ಸದ್ದಿ ನಾಯಕ, ಅವರ ಹಿರಿತನಕ್ಕೆ ನಾವು ಗೌರವ ಕೊಡಬೇಕು. ನಾನು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಹಾಸನದಲ್ಲಿ ಚುನಾವಣೆ ಮಾಡಿದ್ದೆ. ಆಗ ಇವರೆಲ್ಲಾ ಎಲ್ಲಿದ್ದರೋ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿ ತಮ್ಮ ಕೊಠಡಿಗೆ ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನನ್ನ ಒಳ್ಳೆತನಕ್ಕೆ ಅವರಿಗೆ ಖಾರವಾಗಿ ಕಂಡಿರಬಹುದು. ಅವರಿಗೆ ಒಳ್ಳೇಯದಾಗಲಿ, ಇನ್ನು ಮುಂದೆ ಎಲ್ಲರಿಗೂ ಬಹುವಚನದಲ್ಲೇ ಮಾತನಾಡೋಣ ಎಂದು ಶಾಸಕ ಪ್ರೀತಂ ಗೌಡ ಹೇಳಿಕೆಗೆ ತಿರುಗೇಟು ನೀಡಿದರು.
ಶಾಸಕ ಪ್ರೀತಂ ಗೌಡ ಮೊದಲ ಬಾರಿ ಶಾಸಕರಾಗಿದ್ದಾರೆ. ಹಾಗಂತ ಅವರು ದೇವರಾಗಲ್ಲ. ಅವರು ತಮ್ಮ ಇತಿಮಿತಿಯಲ್ಲಿ ಮಾತನಾಡಲಿ. ನಾನು ಮಂತ್ರಿಯಾಗಿದ್ದಾಗ ಪ್ರೀತಂಗೌಡ ಇನ್ನೂ ಹುಟ್ಟೇ ಇರಲಿಲ್ಲ. ಅಂತಹವರಿಗೆಲ್ಲಾ ನೀವು ಮಾಧ್ಯಮದವರು ಯಾಕೆ ಗಮನಕೊಡ್ತೀರಿ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ದೇವೇಗೌಡರ ಮನೆಗೆ ಭೇಟಿ ನೀಡಿದ್ದ ಕುರಿತು ಪ್ರೀತಂಗೌಡ ಇತ್ತೀಚೆಗೆಯಷ್ಟೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
