ಬಿಜೆಪಿಯಲ್ಲಿ ಅಧಿಕಾರದ ಪೈಪೋಟಿ, ಲಾಲಸೆ ಹೆಚ್ಚು: ಎಸ್ ಆರ್ ಪಾಟೀಲ್

ಕಲಬುರ್ಗಿ: ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವಧಿ ಮುಗಿಸೋದು ಬಹಳ ದುಸ್ಥರ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಅಧಿಕಾರ ಪೈಪೋಟಿ, ಅಧಿಕಾರದ ಲಾಲಸೆ ಕಾಣುತ್ತಿದೆ. ಬಿಜೆಪಿಯಲ್ಲಿನ ಅತೃಪ್ತಿ ಬೇಗುದಿಯನ್ನ ನೋಡಿದ್ರೆ ಬಹಳಷ್ಟು ದಿನ ಸರ್ಕಾರ ಇರಲ್ಲ. ರಾಜ್ಯಕ್ಕೆ ಒಳ್ಳೆಯದಾಗಬೇಕಾದ್ರೆ ಸ್ಥಿರವಾದ ಸರ್ಕಾರ ಇರಬೇಕು. ಸಂಪುಟದಲ್ಲಿ ಒಮ್ಮತ ಇರಬೇಕು, ಕುಟುಂಬದ ಹಾಗೆ ಕೆಲಸ ಮಾಡಬೇಕು ಎಂದರು.
ಸಾಕಷ್ಟು ಜನರಿಗೆ ಮಂತ್ರಿ ಸ್ಥಾನ ಸೀಗದೆ ಇರುವುದಕ್ಕೆ ತುಂಬಾ ಅಸಮಾಧಾನ ಇದೆ. ಆನಂದ್ ಸಿಂಗ್ ಒಬ್ಬರೆ ಅಲ್ಲ ಬಹಳಷ್ಟು ಜನ ಅತೃಪ್ತಿಯಾಗಿದ್ದಾರೆ. ಪ್ರಮಾಣ ವಚನ ಸ್ವಿಕರಿಸಿ ಮಂತ್ರಿಯಾದವರಿಗೆ ಖುಷಿ ಇಲ್ಲ. ಈ ಸರ್ಕಾರದಲ್ಲಿ ಯಾರು ಖುಷಿಯಿಂದ ಇಲ್ಲ. ಮಂತ್ರಿಗಿರಿ ಇಲ್ಲದೆ ಇರುವವರು ಕೂಡ ಅಸಮಾಧಾನ ಹೊಂದಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಜನತೆ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ. ಬಿಜೆಪಿ ಪಾರದರ್ಶಕ ಆಡಳಿತ ನೀಡಲಿ, ಸರ್ಕಾರ ಬಿಳಲಿ ಅಂತಾ ನಾವು ಹೇಳ್ತಿಲ್ಲ. ಕೊರೊನಾ ಮೂರನೆ ಅಲೆಯ ಹೊಸ್ತಿಲಿನಲ್ಲಿ ನಾವು ಇದ್ದೇವೆ ಇದರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಹಣ ಮಾಡೋದು ಅಧಿಕಾರದ ಚಿಂತೆ ಮಾತ್ರ ಇದೆ. ಜನಾದೇಶದಿಂದ ಬಂದಿರುವ ಸರ್ಕಾರ ಇದಲ್ಲ ಅಂತಾ ಬಿಜೆಪಿ ಸರ್ಕಾರದ ವಿರುದ್ದ ಎಸ್ ಆರ್ ಪಾಟೀಲ್ ವಾಗ್ದಾಳಿ ನಡೆಸಿದರು.
ಸಚಿವ ಈಶ್ವರಪ್ಪ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅನ್ನೋ ಹೆಸರು ನನ್ನ ಬಾಯಲಿ ಹೇಳಿದ್ರೆ ನನ್ನ ನಾಲಿಗೆ ಮೈಲಿಗೆ ಆಗುತ್ತದೆ. ಈಶ್ವರಪ್ಪ ಅವರ ಮೇದುಳಿಗೆ ಮತ್ತು ನಾಲಿಗೆಗೆ ಸಂಬಂಧನೆ ಇಲ್ಲ. ಮಿದುಳಿಗೆ ನಾಲಿಗೆಗೆ ಡಿ ಲಿಂಕ್ ಆಗಿದೆ. ಬಿಜೆಪಿಯವರಿಗೆ ಸಂಸ್ಕೃತಿ ಸಂಸ್ಕಾರ ಇಲ್ಲ. ಈಶ್ವರಪ್ಪ ಹೇಳಿಕೆಗಳನ್ನ ಕೊಡುವದನ್ನ ನೋಡಿದ್ರೆ ಬಿಜೆಪಿ ಸಂಸ್ಕೃತಿ ಎಂಥಾದ್ದು ಅನ್ನೋದು ಗೊತ್ತಾಗುತ್ತೆ ಎಂದರು.
ಇನ್ನು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಘೋಷಣೆ ವಿಚಾರವಾಗಿಯೂ ಪ್ರತಿಕ್ರಿಯೆ ಕೊಟ್ಟಿರುವ ಪಾಟೀಲ್, ಅವರವರ ಅಭಿಮಾನಿಗಳು ಮುಖ್ಯಮಂತ್ರಿ ಘೋಷಣೆ ಹಾಕಿದ್ದಾರೆ.
ಆದ್ರೆ ನಾವು 113 ಮ್ಯಾಜಿಕ್ ನಂಬರ್ ತಲುಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಅಂತಾ ನಿರ್ಣಯ ಆಗುತ್ತದೆ ಎಂದು ಎಸ್ ಆರ್ ಪಾಟೀಲ್ ಹೇಳಿದ್ದಾರೆ.
