ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಧಕ್ಕೆ ಬರುವಂತೆ ಮಾತನಾಡಿದರೆ ಜನ ಸಹಿಸಲ್ಲ: ಆರ್.ಅಶೋಕ್

ಕೋಲಾರ: ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಪ್ರದಾಯಗಳಿಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಲೇ ಬರುತ್ತಿದೆ ಅದರ ಭಾಗವಾಗಿ ಸಿದ್ದರಾಮಯ್ಯನವರು ಸ್ವಾಮೀಜಿಗಳ ಬಗ್ಗೆ ಮಾತನಾಡಿರುವುದು ಸಹಿಸುವಂತದ್ದಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸಿದರು.
ಎಸ್.ಪಿ ದೇವರಾಜ್ರವರ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಈ ರೀತಿಯ ಹೇಳಿಕೆಗಳಿಂದ ಹಿಂದೂ ಧರ್ಮಕ್ಕೆ ಆಘಾತ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಯಾರದ್ದೋ ಮೇಲೆ ಇರುವ ಅಪಾರ ಪ್ರೀತಿಯನ್ನು ತೋರ್ಪಡಿಸುವ ಭರದಲ್ಲಿ ಇನ್ನೊಂದು ಧರ್ಮಕ್ಕೆ ಘಾಸಿ ಉಂಟು ಮಾಡುವುದು ಅವರಿಗೆ ಶೋಭೆ ತರುವುದಲ್ಲ ಎಂದರು.
ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ಅಂಗಡಿಗಳ ತೆರವು ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. ವಿಧಾನ ಸಭೆಯಲ್ಲಿಯೂ ಚರ್ಚೆ ನಡೆಸಲಾಗುವುದು. ಮಸೀದಿ, ಚರ್ಚ್ಗಳ ಬಗ್ಗೆಯೂ ಸಮಗ್ರವಾದ ಆದೇಶವನ್ನು ಸರ್ಕಾರ ಹೊರಡಿಸಲಾಗಿದೆ. ಈಗಾಗಲೇ ೨೦೦೨ ನೇ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಪ್ರಕಾರ ಹಿಂದೂ ಧರ್ಮದ ದೇವಾಲಯದ ಅಕ್ಕ ಪಕ್ಕ ಹಿಂದೂ ಧರ್ಮದವರಿಗೆ ಅಂಗಡಿ ಮುಗ್ಗಟ್ಟುಗಳನ್ನು ನೀಡಬೇಕು ಎಂದು ಉಲ್ಲೇಖಿಸಲಾಗಿದೆಯಲ್ಲ ಎಂದರು.
ಕೋಲಾರದ ಕ್ಲಾಕ್ ಟವರ್ನಲ್ಲಿ ತ್ರಿವರ್ಣ ಧ್ವಜ ಹಾರಿಸಿರುವ ವಿಚಾರವಾಗಿ ಸಂಸದ ಎಸ್ ಮುನಿಸ್ವಾಮಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಅವರು ಸರ್ಕಾರಿ ಜಾಗದಲ್ಲಿ ಒಂದು ಧರ್ಮದ ಧ್ವಜವನ್ನು ಹಾರಿಸುವುದು ತಪ್ಪು, ಸರ್ಕಾರಿ ವೃತ್ತಗಳು ಯಾವುದೇ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಬಾರದು. ಸರ್ಕಾರಿ ವೃತ್ತದಲ್ಲಿ ರಾಷ್ಟ್ರ ಧ್ವಜಗಳು ಹಾರಾಡಬೇಕು. ಅದರಂತೆ ಕೋಲಾರದ ಕ್ಲಾಕ್ ಟವರ್ ವೃತ್ತದಲ್ಲಿಯೂ ರಾಷ್ಟ್ರಧ್ವಜ ಹಾರಿಸಲಾಗಿದೆ ಎಂದರು.
