ಮಹಿಳೆಗೆ ಹಣ ಕೊಡುವಂತೆ ಪೀಡಿಸುತ್ತಿದ್ದ ನಕಲಿ ಪತ್ರಕರ್ತನ ಬಂಧನ

ದಾವಣಗೆರೆ: ಮಹಿಳೆಯರಿಗೆ ಪತ್ರಕರ್ತನೆಂದು ಹೇಳಿಕೊಂಡು ಹಿಂಸೆ ನೀಡುತ್ತಿದ್ದ ಆರೋಪಿಯನ್ನು ದಾವಣಗೆರೆ ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ.
ಎಸ್. ಪಿ. ಎಸ್. ನಗರದ ಅಜ್ಗರ್ ಬಾಷಾ ಬಂಧಿತ ಆರೋಪಿ. ಮಹಿಳೆಯೊಬ್ಬರಿಗೆ ಹಣಕ್ಕಾಗಿ ಪೀಡಿಸುತ್ತಿದ್ದ. ಜೊತೆಗೂ ಹಿಂಸೆಯನ್ನೂ ನೀಡುತ್ತಿದ್ದ. ಮಹಿಳೆಯೊಬ್ಬರ ಪತಿಯ ಸಂಬಂಧಿಗಳಾದ ಇಸ್ಮಾಯಿಲ್ ಸಾಬ್ ಹಾಗೂ ಅಜ್ಗರ್ ಬಾಷಾ ಎಂಬುವವರು ಮಹಿಳೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದೇ ಇದ್ದರೆ ಮಾಧ್ಯಮದಲ್ಲಿ ಹಾಕಿ ಮಾನ ಮರ್ಯಾದೆ ತೆಗೆಯುತ್ತೇವೆ ಎಂಬ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾರ್ಚ್ 20 ರಂದು ಆರೋಪಿ ಅಜ್ಗರ್ ಬಾಷಾ ಮನೆಗೆ ಕರೆಸಿಕೊಂಡು ನನಗೆ ಹಣ ನೀಡುವಂತೆ ನನ್ನ ಕೈಯನ್ನು ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ. ಹಣ ಕೊಡದಿದ್ದರೆ ನಿನ್ನನ್ನು ಹೋಂಗಾರ್ಡ್ ಕೆಲಸದಿಂದ ತೆಗೆದು ಹಾಕುವಂತೆ ಮಾಡುತ್ತೇನೆ. ನಿನ್ನ ಮಕ್ಕಳ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಮಹಿಳೆಯು ಆಜಾದ್ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪ ಮಾಡಿದ್ದಾರೆ.
ನಗರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯ ಪಿಎಸ್ ಐ ರವೀಂದ್ರ ಕಾಳಭೈರವ ಹಾಗೂ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
