Breaking NewsLatestದಾವಣಗೆರೆರಾಜಕೀಯರಾಜ್ಯ

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಬೆಂಬಲಿಸುವ ವಿಶ್ವಾಸ ಇದೆ: ಈಶ್ವರಪ್ಪ

ದಾವಣಗೆರೆ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತದೆ ಎಂಬ ವಿಶ್ವಾಸ ಇದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಹುತೇಕ ಕಡೆ ಕಾಂಗ್ರೆಸ್ ವಿರುದ್ಧ ಜೆಡಿಎಸ್ ನವರೇ ಗೆದ್ದಿದ್ದಾರೆ. ಕಾಂಗ್ರೆಸ್ ಬೆಂಬಲಿಸಲು ಜೆಡಿಎಸ್ ಗೆ ಇಷ್ಟವಿಲ್ಲ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾರೆ ಎಂದುಕೊಂಡಿದ್ದೇವೆ ಎಂದು ಹೇಳಿದರು.

ಈಗಾಗಲೇ ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ಜನರು ಹೊರ ಹಾಕಿದ್ದಾರೆ. ಬಿಜೆಪಿ ಅನ್ನು ಜೆಡಿಎಸ್ ನವರು ಬೆಂಬಲಿಸುವ ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ನೋಡೋಣ, ಜೆಡಿಎಸ್ ನವರು ಏನು ಮಾಡುತ್ತಾರೆ ಕಾದು ನೋಡೋಣ. 25 ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಕಣಕ್ಕಿಳಿದಿದೆ. ಉಳಿದೆಡೆ ಯಾರಿಗೆ ಬೆಂಬಲಿಸುತ್ತಾರೆ ಎಂಬುದನ್ನು ಆ ಪಕ್ಷದ ನಾಯಕರು ನಿರ್ಧಾರ ಮಾಡಲಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಚುನಾವಣೆಗೆ ಕಣಕ್ಕಿಳಿಸಿರುವ ಅಭ್ಯರ್ಥಿಗಳಿಗೂ ಹಾಗೂ ಕಾಂಗ್ರೆಸ್ ಗೂ ಸಂಬಂಧನೇ ಇಲ್ಲ. ದುಡ್ಡಿನ ಲೆಕ್ಕದ ಆಧಾರದ ಮೇಲೆ‌ ಕಾಂಗ್ರೆಸ್ ನವರು ಅಭ್ಯರ್ಥಿಗಳ ಆಯ್ಕೆ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಅನೇಕ ಕಡೆ ಆ ಪಕ್ಷಕ್ಕೂ ಹಾಗೂ ಅಭ್ಯರ್ಥಿಗಳಿಗೂ ಯಾವುದೇ ಸಂಬಂಧನೇ ಇಲ್ಲ. ಇದನ್ನು ನೋಡಿದರೆ ಕಾಂಗ್ರೆಸ್ ಯಾವ ರೀತಿ ಚುನಾವಣೆ ಎದುರಿಸುತ್ತದೆ‌ ಎಂಬುದು ಗೊತ್ತಾಗಲಿದೆ. ಮತದಾರರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು‌.

ರಾಜಕಾರಣದ ಗಂಧಗಾಳಿ ಗೊತ್ತಿಲ್ಲದವರು ಅಭ್ಯರ್ಥಿಗಳಾಗಿದ್ದಾರೆ. ಗ್ರಾಮೀಣ ಪ್ರದೇಶದ ಸಮಸ್ಯೆಯ ಅರಿವೇ ಇಲ್ಲ. ಕಾಂಗ್ರೆಸ್ ನಾಯಕರು ಈ ಬಗ್ಗೆ ಯೋಚಿಸಬೇಕು. ರಾಜ್ಯದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ನಗರಸಭೆ ಸೇರಿದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್ ಸೋಲಿಸಿ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷದ ನಾಯಕರು ತೀರ್ಮಾನಿಸುತ್ತಾರೆ ಎಂದಷ್ಟೇ ಈಶ್ವರಪ್ಪ ಹೇಳಿದರು.

ಅಧಿಕಾರಿಗಳ ಭ್ರಷ್ಟಾಚಾರ, ಲಂಚ ಇಂದು ನಿನ್ನೆಯದಲ್ಲ. ಇದು ಕಾಂಗ್ರೆಸ್ ಕಾಲದ ಬಳವಳಿ. ಅಧಿಕಾರಿಗಳಿಗೆ ಭಯ ಇಲ್ಲದ ಕಾರಣ ಇಷ್ಟೊಂದು ಅಕ್ರಮ ಹಣ ಸಂಪಾದನೆ ಮಾಡಿದ್ದಾರೆ‌. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಿಗಿ ಮಾಡಿದ್ದೇವೆ. ಎಸಿಬಿ ದಾಳಿ ನಡೆಸಿದಾಗ ಭ್ರಷ್ಟಾಚಾರದ ಹಣ, ಬಂಗಾರ ಸಿಗ್ತಾ ಇದೆ. ಎಸಿಬಿ ಇನ್ನು ಬಿಗಿಯಾಗಿ ಕೆಲಸ ಮಾಡಲು ಸಂಪೂರ್ಣ ಅಧಿಕಾರ ನೀಡಬೇಕಿದೆ. ಭ್ರಷ್ಟಾಚಾರ ಮಾಡಿದವರು ಹಾಗೂ ಲಂಚ ಪಡೆದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ರಾಜ್ಯಕ್ಕೆ ಒಳಿತಾಗುತ್ತೆ ಎಂದು ಅಭಿಪ್ರಾಯಪಟ್ಟರು.

Spread the love

Related Articles

Leave a Reply

Your email address will not be published. Required fields are marked *

Back to top button