ಕೋವಿಡ್: ಮುಂಜಾಗೃತಾ ಕ್ರಮ ಕುರಿತು ಶೀಘ್ರವೇ ಸಭೆ; ಸಿಎಂ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ಧಾರವಾಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ 19 ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ಉಲ್ಬಣ ಆಗುತ್ತಿರುವುದನ್ನು ಮತ್ತು ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿ ಅತಿಶೀಘ್ರವೇ ಪರಿಹಾರ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಂಜೆ ಉನ್ನತಮಟ್ಟದ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ತಮ್ಮ ಆರ್.ಟಿ.ನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಕೋವಿಡ್ ತಜ್ಞರು,ಆರೋಗ್ಯ ಮತ್ತು ಪ್ರಕೃತಿ ವಿಕೋಪ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಕುರಿತು ಚರ್ಚಿಸಲಾಗುವುದು ಎಂದರು.
ಕೊರೋನಾ ಹೊಸ ತಳಿ ಬಂದಿದೆ, ಕೇರಳದಿಂದ ಹರಡಿದೆ ಎಂದು ಹೇಳಲಾಗುತ್ತಿದೆ ಈ ಸಂಬಂಧ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ನಡೆಸಿ ಅನುಸರಿಸಬೇಕಾದ ಮಾನದಂಡ ಮತ್ತು ಕ್ರಮಗಳ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಆರೋಗ್ಯ ಇಲಾಖೆ ಜತೆ, ಸಾರ್ವಜನಿಕರು ತಡ ಮಾಡದೇ ತಕ್ಷಣ ಕೈಗೊಳ್ಳಬಹುದಾದ ಕ್ರಮಗಳು ಕುರಿತೂ ಸಭೆ ಚರ್ಚಿಸಲಾಗುವುದು ಎಂದು ಸಿಎಂ ಹೇಳಿದರು.
ಕಲಬುರಗಿ ಆಯುಕ್ತರ ವಿರುದ್ಧದ ದೂರಿನ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಅದನ್ನು ಪರಿಶೀಲಿಸುತ್ತೇನೆ. ಆ ಕುರಿತು ಸಂಪೂರ್ಣ ಮಾಹಿತಿ ತಮಗಿಲ್ಲ. ದೂರಿನ ಬಗ್ಗೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದರು.
ಕಡತಗಳ ವಿಲೇವಾರಿ ಆಗುತ್ತಿಲ್ಲ
ಹಲವು ಇಲಾಖೆಗಳಲ್ಲಿ ಕಡತಗಳು ವಿಲೇವಾರಿಯಾಗಿವೆ, ಕೆಲವು ಇಲಾಖೆಗಳಲ್ಲಿ ಕಾನೂನಾತ್ಮಕ ಮತ್ತು ತಾಂತ್ರಿಕ ಕಾರಣಗಳಿಂದ ವಿಲೇವಾರಿಯಾಗಿಲ್ಲ. ಈ ಸಂಬಂಧ ಈಗಾಗಲೇ ತಾವು ಸಭೆ ಮಾಡಿದ್ದು ಕಾನೂನು ತೊಡಕಿರುವ ಕಡತಗಳಿಗೆ ಶೀಘ್ರವೇ ಕಾನೂನು ಪರಿಹಾರ ಕೊಡಲು ಹಾಗೂ ತಾಂತ್ರಿಕ ಕಾರಣಗಳಿಂದ ಉಳಿದಿರುವ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ರಾಜ್ಯದ ಮುಖ್ಯಕಾರ್ಯದರ್ಶಿಯವರಿಗೆ ಸೂಚನೆ ನೀಡಲಾಗಿದೆ ಎಂದರು.
ಕಾನೂನು ಸಚಿವರಿಗೂ ಈ ಸಂಬಂಧ ಸಭೆ ಮಾಡಿ ತಮ್ಮ ಅಭಿಪ್ರಾಯಗಳನ್ನು ನೀಡಿದರೆ ಕೂಡಲೇ ಕಡತ ವಿಲೇವಾರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
