ಕಲಬುರಗಿ ಮೇಯರ್, ಉಪ ಮೇಯರ್ ಚುನಾವಣೆ ಭವಿಷ್ಯ ಇಂದು ನಿರ್ಧಾರ

ಕಲಬುರಗಿ: ಫೆಬ್ರವರಿ 5 ರಂದು ನಿಗದಿಯಾಗಿರುವ ಕಲಬುರಗಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಚುನಾವಣೆ ಮತದಾರರ ಪಟ್ಟಿಯಲ್ಲಿ ಜಿಲ್ಲೆಗೆ ಸಂಬಂಧಿಸದ ಐವರು ಎಮ್ಎಲ್ಸಿಗಳ ಹೆಸರು ಸೇರ್ಪಡೆ ಮತ್ತು ಏಕಾಏಕಿ ಮೀಸಲಾತಿ ಬದಲಾವಣೆ ಪ್ರಶ್ನಿಸಿ ಮತ್ತು ಚುನಾವಣೆಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದೆ.
ಲಕ್ಷ್ಮಣ್ ಸವದಿ, ರಘುನಾಥ್ ಮಲ್ಕಾಪುರೆ ಸೇರಿದಂತೆ ಐವರು ಎಮ್ಎಲ್ಸಿಗಳ ಹೆಸರನ್ನ ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದನ್ನು ಮತ್ತು ಈ ಹಿಂದೆ ಮೇಯರ್ ಚುನಾವಣೆ ಘೋಷಣೆಯಾದಾಗ ಮಾಡಿದ್ದ ಮೀಸಲಾತಿ ಮತ್ತೆ ಬದಲಾವಣೆ ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ಗೆ ಪ್ರತ್ಯೇಕವಾಗಿ ಎರಡು ರಿಟ್ ಅರ್ಜಿಗಳನ್ನು ಸಲ್ಲಿಸಿದೆ.
ಗುರುವಾರ ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಇಂದ್ರೇಶ್, ವಿಚಾರಣೆಯನ್ನ ಶುಕ್ರವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಶುಕ್ರವಾರ ಹೊರಬರುವ ಕಲಬುರಗಿ ಹೈಕೋರ್ಟ್ ಪೀಠದ ತೀರ್ಪಿನ ಆಧಾರದ ಮೇಲೆ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಭವಿಷ್ಯ ನಿಂತಿದ್ದು, ಎಲ್ಲರ ಚಿತ್ತ ಹೈಕೋರ್ಟ್ನತ್ತ ನೆಟ್ಟಿದೆ.
